ಮಂಗಳೂರು, ಮೇ 19: ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಿ. ಕೆ. ಹರಿಪ್ರಸಾದ್ ಮತ್ತು ಕರ್ನಾಟಕ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕರಾಗಿ ಆಯ್ಕೆಯಾಗಿರುವ ಮಾಜೀ ಮಂತ್ರಿ ಯು. ಟಿ. ಖಾದರ್ ಅವರಿಗೆ ಮೇ 19ರಂದು ಅಭಿನಂದನಾ ಸಮಾರಂಭ ನಡೆಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌ರಿಂದ ಕಾರ್ಯಕ್ರಮ ಉದ್ಘಾಟನೆ

ಸಾಹುಲ್ ಹಮೀದ್ ಅವರು ಸ್ವಾಗತಿಸಿದರು ಹಾಗೂ ಶಶಿಧರ ಹೆಗ್ಡೆ ಅವರು ಎಲ್ಲರನ್ನೂ ಸ್ವಾಗತಿಸಿದರು.

ನಿಷ್ಟುರವಾದಿ ರಾಜಕಾರಣಿಯಾದ ಹರಿಪ್ರಸಾದ್‌ರು ಕೋಮುವಾದಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಗಟ್ಟಿಯಾಗಿ ಹೇಳುವವರು. ಹರಿಪ್ರಸಾದರ ಬಗೆಗೆ ಭ್ರಷ್ಟಾಚಾರದ ಆರೋಪ ಇಲ್ಲ. ಹಾಗಾಗಿ ಧೈರ್ಯದಿಂದ ಬಿಜೆಪಿಯ ಭ್ರಷ್ಟಾಚಾರದ ಬಗೆಗೆ  ನೇರವಾಗಿ ಮಾತನಾಡುವ ಧೈರ್ಯಶಾಲಿ ಅವರು ಎಂದು ಉದ್ಘಾಟನಾ ಭಾಷಣದಲ್ಲಿ ಸಲೀಂ ಅಹಮದ್ ಅವರು ಹೇಳಿದರು.

ಹಾಗೆಯೇ ಯು. ಟಿ. ಖಾದರ್ ಅವರು ಎಲ್ಲ ವರ್ಗದ ಜನರನ್ನು ಕಟ್ಟಿಕೊಂಡ ಜನಪರ ನಾಯಕ ಎಂದೂ ಅವರು ತಿಳಿಸಿದರು.

ನಿಮ್ಮ ಮನೆಯ ದೇವರನ್ನೆಲ್ಲ ಚರಂಡಿಗೆಸೆಯಿರಿ ಎಂದು ದಲಿತರಿಗೆ ಕರೆ ಕೊಟ್ಟ, ಕನ್ನಡ ಸಾಹಿತ್ಯ ಬೂಸಾ ಎಂದ ಬಸವಲಿಂಗಪ್ಪನವರ ಜೊತೆ ನಿಂತವರು ಮತ್ತು ಉಡುಪಿ ಹೋಟೆಲ್‌ಗಳ ಮೇಲೆ ಮುಂಬಯಿಯಲ್ಲಿ ಶಿವಸೇನೆ ಹೊರಡಿ ಇಲ್ಲಿಂದ ಎಂದು ಹೇಳಿದಾಗ ಹಾಗೂ ದೇವರಾಜ ಅರಸು ಹೋರಾಟಗಳಲ್ಲಿ ಜೊತೆಗೆ ನಿಂತವರು ಹರಿಪ್ರಸಾದ್ ಎಂದು ಅಭಿನಂದನಾ ಭಾಷಣದಲ್ಲಿ ಹನುಮಂತಯ್ಯ ಹೇಳಿದರು.

ಖಾದರ್ ಅವರು ನೋಡಿದರೆ ನೆಮ್ಮದಿಯ ಮನುಷ್ಯ ಎಂಬಂತೆ ಕಾಣಿಸುತ್ತಾರೆ. ಆದರೆ ಅವರನ್ನು ಮಾತನಾಡಿದರೆ ಅವರ ಒಳಗಿರುವ ಬಿಸಿ ಗೊತ್ತಾಗುತ್ತದೆ. ಸತ್ಯ ಅತಿರೇಕದ್ದಲ್ಲ ಎಂದು ಸಮಾಧಾನದಿಂದ ಉದ್ವೇಗವಿಲ್ಲದೆ ಮಾತನಾಡುವ ಸಮತೂಕದ ಚಿಂತನೆಯ ನಾಯಕ ಖಾದರ್ ಎಂದು ಹನುಮಂತಯ್ಯ ಹೇಳಿದರು.

ಮಾಜೀ ಮಂತ್ರಿ ರಮಾನಾಥ ರೈ ಅವರು ಮಾತನಾಡಿ ಬಂಟ್ವಾಳದ ಅರಳದ ಹರಿಪ್ರಸಾದರು ರಾಜಕೀಯ ಶಕ್ತಿಯಾದುದು ಬೆಂಗಳೂರಿನಲ್ಲಿ. ನಮ್ಮ ಆರಂಭದ ರಾಜಕೀಯದಲ್ಲಿ ಅವರ ಕೊಡುಗೆಯೂ ಇದೆ. ಅಲ್ಪಸಂಖ್ಯಾತರ, ಹಿಂದುಳಿದವರ ಅವರ ಕಾಳಜಿ ಪ್ರಶ್ನಾತೀತ ಎಂದು ಹೇಳಿದರು.

ಅಭಿನಂದನೆಗೆ ಒಳಗಾದ ಹರಿಪ್ರಸಾದರು ಮಾತನಾಡಿ ನನ್ನ ತಾಯಿ ಮನೆ ಉಲ್ಲಾಳ, ಇಲ್ಲಿನ ನೆಲದ ಅಬ್ಬಕ್ಕ ರಾಣಿಯ ಧೈರ್ಯ ನನ್ನಲ್ಲೂ ಸ್ವಲ್ಪ ಇದೆ. ನಮ್ಮ ತುಳುವರು ಎಷ್ಟೋ ಊರುಗಳಲ್ಲಿ ಪೊಕೋಡಾ ಚಾ ಮಾರಿದವರು. ಮೋದಿಯವರೆ ಅದನ್ನು ನಕಲು ಮಾಡಬೇಡಿ ಜನರಿಗೆ ಉದ್ಯೋಗ ನೀಡಿ. ನಮ್ಮ ಗುರಿ ಸಮಪಾಲು, ಸಹಬಾಳ್ವೆ, ಮೋದಿಯವರದು ಎಲ್ಲ ಹಿಂದೂ ಎನ್ನುತ್ತ ಪಾಲು ಪಾಲು. ಭಾರತದಲ್ಲಿ ಎಂಟು ಧರ್ಮಗಳ ವೈವಿಧ್ಯತೆ ಉಳಿಯಬೇಕು, ಬಲಿಯಬೇಕು ಎಂದರು.

ಸಂಘ ಪರಿವಾರದವರ ಉದ್ದೇಶ ಹಿಜಬ್ ವಿರೋಧಿಸುವುದಲ್ಲ. ಆ ಮೂಲಕ ಹೆಣ್ಣು ಮಕ್ಕಳು ಓದಿ ಸಮಾಜದ ಅಭಿವೃದ್ಧಿ ತಡೆಯುವುದಾಗಿದೆ. ವಿದ್ಯಾವಂತರಾಗಿ, ಸಂಘಟಿತರಾಗಿ ಎಂದು ಹೇಳಿದವರು ನಾರಾಯಣ ಗುರುಗಳು. ಹಿಂದುಳಿದವರೆಲ್ಲ ಓದಿ ಒಗ್ಗೂಡಬಾರದು ಎನ್ನುವುದೇ ಬಿಜೆಪಿಯ ಗುರುಗಳ ವಿರುದ್ಧದ ಸಂಚು ಎಂದು ಸಹ ಹರಿಪ್ರಸಾದರು ಹೇಳಿದರು.

ಯು. ಟಿ. ಖಾದರ್ ಅವರು ಮಾತನಾಡಿ ಪಕ್ಷ ಕಟ್ಟಿದ ಹಿರಿಯರು ತೋರಿದ ದಾರಿ ನನ್ನನ್ನು ಈ ಮಟ್ಟಕ್ಕೆ ಏರಿಸಿದೆ. ಉಲ್ಲಾಳದ ಕಾರ್ಯಕರ್ತರು, ಜನರು ಹಾಗೂ ಕಾಂಗ್ರೆಸ್ ಪಕ್ಷ ನನ್ನನ್ನು ಬೆಳೆಸಿದೆ. ಅಂಬೇಡ್ಕರ್ ಸಂವಿಧಾನ ಬದಿಗೊತ್ತಿ ಬಿಜೆಪಿ ಸರಕಾರಗಳು ನಿತ್ಯ ಅಲ್ಪಸಂಖ್ಯಾತರನ್ನು, ದಲಿತರನ್ನು ಭಯಕ್ಕೆ ತಳ್ಳಿ ಇಟ್ಟಿದೆ. ಸಂವಿಧಾನಕ್ಕೆ ಬದ್ಧವಾಗಿ ಕಾಂಗ್ರೆಸ್ ಪಕ್ಷವು ಜನರ ಭಯ ಹೋಗಲಾಡಿಸಲು ಹೋರಾಡುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು. ಮೀಸಲಾತಿ ರದ್ದು ಪಡಿಸುವ ಹುನ್ನಾರ ಬಿಜೆಪಿಯದುಎಂದು ಹೇಳಿದರು.

ಕಾರ್ ಮಳೆಗೆ ಸಿಗಬೇಡ, ಕೊನೆಯ ಭಾಷಣಕಾರ ಆಗಬೇಡ ಎಂಬಂತೆ ಎಲ್ಲರು ಹಿಂಡಿದ ಮೇಲೆ ರಸ ಹಿಂಡಿದ ವಿಷಯದಲ್ಲಿ ನಿಂತಿದ್ದೇನೆ ಎಂದು ಸಭಾಧ್ಯಕ್ಷ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತು ಆರಂಭಿಸಿದರು. ಕರ್ನಾಟಕದಲ್ಲಿ ಮೊದಲ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೃಷ್ಟಿಯಾದುದೆ ಬಿ. ಕೆ. ಹರಿಪ್ರಸಾದರಿಗೆ ಎಂದು ಹೇಳಿದರು.

ಒಂದೇ ದೇವರು, ಸಮಾನತೆ, ಶಿಕ್ಷಣ ಎಂದ ನಾರಾಯಣ ಗುರುಗಳ ಹಾಗೂ ಭಗತ್ ಸಿಂಗ್ ಪಠ್ಯ ಬದಲಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲ, ನಾಗಪುರ ಶಿಕ್ಷಣ ನೀತಿ. ಕಾಂಗ್ರೆಸ್ ಇವನ್ನೆಲ್ಲ ಯು ಟರ್ನ್ ಮಾಡಲು ಬರುತ್ತಿದೆ. ಬಿಜೆಪಿಯವರು ದೇವಾಲಯ, ಮಸೀದಿ, ಇತ್ಯಾದಿ ಮಾತನಾಡುತ್ತದೆ ಆದರೆ ಯುವಕರಿಗೆ ಉದ್ಯೋಗ ನೀಡುವ ಬಗೆಗೆ ಮಾತನಾಡಿ. ಐದು ಜನ ಆರು ಜನಾರ್ದನ ಪೂಜಾರಿ ವರ್ಗದವರು ಹಿಂದೆ ಸಂಸದರಿದ್ದರು. ಯಾಕೆ ಈಗ ಯಾರೂ ಇಲ್ಲ ಏಕೆಂದರೆ ಯುವಕರು ಹಿಂದುತ್ವಕ್ಕೆ ಮಾರಿಕೊಂಡುದು ಎಂದು ಶಿವಕುಮಾರ್ ಹೇಳಿದರು.

ಬಿಜೆಪಿ ಎಂದರೆ ಭ್ರಷ್ಟಾಚಾರ, ಪೋಲೀಸು ಕೆಲಸದಲ್ಲಿ ಅಕ್ರಮ, ನಮ್ಮ ಶಾಂತಿಯ ತೋಟವನ್ನು ಸಂಘೀ ತತ್ವಗಳು ಹಿಂಸೆಯ ತೋಪು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ದ. ಕ. ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜೀ ಶಾಸಕರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಸಂತ ಬಂಗೇರ, ಜೆ. ಆರ್. ಲೋಬೋ, ಶಕುಂತಲಾ ಶೆಟ್ಟಿ, ಮೊಯಿದ್ದೀನ್ ಬಾವಾ, ಐವಾನ್ ಡಿಸೋಜಾ, ಅಲ್ಲದೆ ರಾಜಶೇಖರ ಕೋಟ್ಯಾನ್, ಪಿ. ವಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.