ವಿದ್ಯಾಗಿರಿ: ಯಾವುದೇ ಉತ್ತಮ ಕಾರ್ಯವು ಎಲ್ಲರಿಗೆ ತಲುಪುವುದು ಬಹುಮುಖ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಆದಿ ದ್ರಾವಿಡ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ, ಸಮಗಾರ ಸಮಾಜ, ಮರಾಟಿ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ, ಪಾಣಾರ ಅಜಲಯಾನೆ ನಲಿಕೆಯವರ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲಾ ಪರವನ್ ಸಮಾಜ ಸುಧಾರಕರ ಸಂಘ(ರಿ.) ಹಂಡೆಲು, ಪುತ್ತಿಗೆ ಮೂಡುಬಿದಿರೆ, ಮುಗೇರ ಸಮುದಾಯ ಮತ್ತು ಕೊರಗ ಸಮುದಾಯ  ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡುವಾಗ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮ ಕರ್ತವ್ಯ ಎಂದರು. 

ನಮ್ಮ ದೇಹದ ಎಲ್ಲಾ ಅಂಗಗಳು ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ ಕಣ್ಣು ಸರಿ ಇದ್ದರೆ, ಜಗತ್ತನ್ನು ಹಾಗೂ ಜೀವನವನ್ನು ಬಹಳ ಸುಂದರವಾಗಿ ನಮಗೆ ಕಾಣಲು ಸಾಧ್ಯ. ಆದ್ದರಿಂದ ಕಣ್ಣಿಗೆ ನಾವು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು. ಇದು ನಮ್ಮ ಕರ್ತವ್ಯ ಎಂದರು.

ಕಣ್ಣಿನ ಸಮಸ್ಯೆಗೆ ಶೇ 90ರಷ್ಟು ಪರಿಹಾರ ಕಲ್ಪಿಸಲು ನಮ್ಮ ದೇಶ ಹಾಗೂ ತಜ್ಞ ವೈದ್ಯರು ಶಕ್ತರಾಗಿದ್ದಾರೆ. ಆದರೆ, ಸೂಕ್ತ ಕಾಲದಲ್ಲಿ ಪರೀಕ್ಷೆ ಮಾಡಿಕೊಂಡು ಮೂಢನಂಬಿಕೆಗಳಿಂದ ಹೊರಬಂದು ಸೂಕ್ತ ಕಾಲದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕನ್ನಡಕ ವಿತರಿಸಲಾಯಿತು.

ಸಮಗಾರ ಸಮಾಜ ಸಂಘದ ಗೌರವಾಧ್ಯಕ್ಷ ಹರೀಶ್ ಎಂ.ಕೆ ಪ್ರಮುಖರಾದ ನಾರಾಯಣ ಮಾಂಟ್ರಾಡಿ, ಅಚ್ಯುತ ಸಂಪಿಗೆ, ಯಂ.ಶೀನ, ರಾಮಚಂದ್ರ ಕೆಂಬಾರೆ, ಎನ್ .ಕೆ.ಸಾಲಿಯಾನ್, ನಾರಾಯಣ, ಚಂದ್ರಶೇಖರ್, ಪ್ರಸಾದ್ ನೇತ್ರಾಲಯದ ಡಾ.ಅಶ್ವಿನ್ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ  ಪ್ರಾಂಶುಪಾಲ ಡಾ.ಸಜಿತ್‍ಎಂ, ಪತ್ರಕರ್ತ ಬೆಳವಾಯಿ ಸೀತರಾಮ್ ಆಚಾರ್ಯ, ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ್ ಭಟ್ ಇದ್ದರು. 

ಇಂದು ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 225 ಜನರು ಪಾಲ್ಗೊಂಡು, 151 ಕನ್ನಡಕ, 24 ಜನರು ಶಸ್ತ್ರ ಚಿಕಿತ್ಸೆಗೆ ನೋಂದಾಯಿಸಿಕೊಂಡರು. ಇಲ್ಲಿವರೆಗೆ ನಡೆದ ಒಟ್ಟು ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 797 ಜನರು ಪಾಲ್ಗೊಂಡು 434 ಜನರು ಕನ್ನಡಕ ಪಡೆದರೆ ಹಾಗೂ 110 ಜನರು ಶಸ್ತ್ರ ಚಿಕಿತ್ಸೆಗೆ ಹೆಸರು ನೋಂದಾಯಿಸಿ, 29 ಜನರು ಶಸ್ತ್ರ ಚಿಕಿತ್ಸೆ ಪಡೆದುಕೊಂಡರು. 

ಪ್ರಕಾಶ್ ನಾಯ್ಕ್  ಸ್ವಾಗತಿಸಿ, ಡಾ. ನಮೃತಾ ಕುಲಾಲ್ ನಿರೂಪಿಸಿ,  ರವೀಶ್ ಎನ್. ಕೆ. ವಂದಿಸಿದರು.