ಉಡುಪಿ: ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಜನರು ನನಗೆ ಮತ ಹಾಕಿದ್ದಾರೆ, ಹಾಗೂ ನನ್ನ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರರಿಗೆ ಕೃತಜ್ಞತೆಗಳನ್ನೂ ಸಲ್ಲಿಸುತ್ತೇನೆ ಎಂದು ಉಡುಪಿ-ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಎನ್ ಡಿ ಎ ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆ ನಮಗೆ ಇತ್ತು. ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇತ್ತು. ಎನ್ ಡಿ ಎ 295ರ ಆಸುಪಾಸು ಗೆಲುವು ಪಡೆದಿದೆ ಎಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಎನ್ ಡಿ ಎ ಸ್ಥಾನ ನಿರೀಕ್ಷೆಯ ಮಟ್ಟಕ್ಕೆ ಮುಟ್ಟಿಲ್ಲ ಎಂಬುದು ನಿಜ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ನಾವು ಊಹೆ ಮಾಡಿದ ಪ್ರಮಾಣದಲ್ಲಿ ಗೆಲುವು ಪಡೆದಿಲ್ಲ. ಕೊನೆಯ ಹಂತದಲ್ಲಿ ಇಂಡಿಯಾ ಒಕ್ಕೂಟದವರು ಒಂದು ಲಕ್ಷ ರೂ. ಕೊಡುವುದಾಗಿ ಹೇಳಿದರು. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಎನ್ ಡಿ ಎ ಮತ್ತೊಮ್ಮೆ ಗೆದ್ದಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನ ಗೆಲ್ಲುವ ಭರವಸೆ ಇತ್ತು. ಸ್ವಲ್ಪ ಕಡಿಮೆ ಇದ್ದೇವೆ. ತುಂಬಾ ಕಡಿಮೆ ಏನೂ ಬಂದಿಲ್ಲ. ಭಾರತಕ್ಕೆ ನರೇಂದ್ರ ಮೋದಿ ತುಂಬಾ ಕೆಲಸ ಮಾಡಿದ್ದಾರೆ. ಬಡವರ ಕಲ್ಯಾಣ ಯೋಜನೆಗಳು ಕೈ ಹಿಡಿದಿವೆ. 370 ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ಮಾಡಿದ್ದಾರೆ.
ಎಲ್ಲಾ ಘಟನೆಗಳು ಕಣ್ಣಮುಂದೆ ಇದ್ದರೂ ಜನ ಒಂದು ಲಕ್ಷ ರೂ. ನೀಡುವ ಇಂಡಿಯಾ ಒಕ್ಕೂಟ ಘೋಷಣೆಗೆ ಗಮನ ಸೆಳೆದಿದ್ದಾರೆ. ಇಂಡಿಯಾ ಒಕ್ಕೂಟದ ಈ ತಂತ್ರ ಕೆಲಸ ಮಾಡಿರುವುದು ಸತ್ಯ ಎಂದು ಅವರು ತಿಳಿಸಿದರು. ಕೊನೆಯಲ್ಲಿ ಅವರು ಆದಷ್ಟು ಬೇಗ ಹಿಂದಿ, ಇಂಗ್ಲಿಷ್ ಕಲಿಯುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದರು.