ಮುಂಬಯಿ, ಜೂ. 28: ಶತಮಾನ ಸಂಭ್ರಮದಲ್ಲಿರುವ ಬಿ.ಎಸ್.ಕೆ. ಬಿ. ಎಸೋಸಿಯೇಶನ್, ಸಾಯನ್, ಗೋಕುಲ, ಶತಮಾನೋತ್ಸವಾಚರಣೆಯ ಪ್ರಯುಕ್ತ  ಜೂ. 18 ರಿಂದ ಮಂಗಳವಾರ   ಜೂ. 18 24 ರ ವರೆಗೆ ಉತ್ತರಾದಿ ಮಠ  ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರಿಂದ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ ಕಾರ್ಯಕ್ರಮವನ್ನು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್,  ಬಿ.ಎಸ್. ಕೆ.ಬಿ. ಎಸೋಸಿಯೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡಿತ್ತು. 

ಬುಧವಾರದಂದು ಶ್ರೀ ಕೃಷ್ಣ ಸನ್ನಿಧಿಗೆ ಆಗಮಿಸಿದ ಶ್ರೀಪಾದರನ್ನು ಗೌ.ಕಾರ್ಯದರ್ಶಿ ಅನಂತಪದ್ಮನಾಭ ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥರು  ಬಿ. ರಮಾನಂದ ರಾವ್, ಕೃಷ್ಣ ಆಚಾರ್ಯ, ಜಗದೀಶ್ಚಂದ್ರ ಕುಮಾರ್, ವೇದಮೂರ್ತಿಗಳಾದ  ಕೃಷ್ಣರಾಜ್ ತಂತ್ರಿ, ದರೆಗುಡ್ಡೆ ಶ್ರೀನಿವಾಸ್ ಭಟ್, ಗಣೇಶ್ ಭಟ್, ರಾಮವಿಠಲ ಕಲ್ಲೂರಾಯ ಮುಂತಾದವರ ಮುಂದಾಳತ್ವದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ದೇವಾಲಯಕ್ಕೆ ಕರೆತಂದರು. ಪ ಪೂ ಶ್ರೀಪಾದರು  ಗೋಪಾಲಕೃಷ್ಣ ದೇವರಿಗೆ ಆರತಿ ಬೆಳಗಿ ದೇವಾಲಯ ಸಭಾಗೃಹದಲ್ಲಿ ಪೀಠಸ್ಥರಾದ ಬಳಿಕ ಪ್ರವಚನ ಸಪ್ತಾಹದ ಪ್ರಾಯೋಜಕರಾದ  ಸುಮಾ ಮತ್ತು ವೇದಮೂರ್ತಿ ಕೃಷ್ಣರಾಜ್ ತಂತ್ರಿ, ಸುಮತಿ ಹರೀಶ್ ಮತ್ತು  ದಿವಂಗತ ಬೋಳ  ಸುಬ್ಬಯ್ಯ ಶೆಟ್ಟಿಯವರ ಸ್ಮರಣಾರ್ಥ ಅವರ ಮಗ ಚಂದ್ರಶೇಖರ ಶೆಟ್ಟಿ  ದಂಪತಿಯವರು  ಶ್ರೀಪಾದರಿಗೆ ಶಾಲು ಹೊದಿಸಿ,  ತುಳಸಿ ಹಾರ,  ಫಲ ವಸ್ತುಗಳನ್ನು ಸಮರ್ಪಿಸಿ, ಫಲ ಮಂತ್ರಾಕ್ಷತೆ ಪಡೆದು ಅನುಗ್ರಹೀತರಾದರು. ಅಂತೆಯೇ ಗೋಕುಲದ ಪದಾಧಿಕಾರಿಗಳು ಹಾಗೂ ನೆರೆದ ಭಕ್ತಾದಿಗಳಿಗೆ ಶ್ರೀ ಶ್ರೀಯವರು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. 

ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಜರಗಿದ ಭಾಗವತ ಪ್ರವಚನ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮವು ಕೋಶಾಧಿಕಾರಿ ಹರಿದಾಸ್ ಭಟ್ ರವರ ಸ್ವಾಗತದೊಂದಿಗೆ ಆರಂಭವಾಯಿತು. ಶ್ರೀ ಸತ್ಯಧ್ಯಾನ ಪೀಠ, ಮುಲುಂಡ್ ಇದರ ಕುಲಪತಿಗಳಾದ ಮಾಹುಲಿ  ವಿದ್ವಾನ್ ವಿದ್ಯಾಸಿಂಹ ಆಚಾರ್ಯರವರು ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ  ಪರಿಚಯವನ್ನು ಮಾಡಿಕೊಡುತ್ತಾ, ಶ್ರೀ ಶ್ರೀಯವರು ಜ್ಞಾನ, ಭಕ್ತಿ, ವೈರಾಗ್ಯವನ್ನು ಮೈ ಗೂಡಿಸಿಕೊಂಡ, ಧರ್ಮವನ್ನು ಭಗವಂತನ  ಪ್ರೀತಿಗಾಗಿಯೇ ಪಾಲಿಸುವ,  ಪ್ರಗಲ್ಭ ಪಾಂಡಿತ್ಯದ ಗಣಿ, ಇಂತಹ ಮಹಾನ್  ಮಹಾತ್ಮರು ಇಂದು ನಮಗೆಲ್ಲಾ, ಭಾಗವತದ ಜ್ಞಾನ  ಸಾರವನ್ನು ಉಣಬಡಿಸಲು ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.  ಉಪಾಧ್ಯಕ್ಷರಾದ ವಾಮನ್ ಹೊಳ್ಳರವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, ಶತಮಾನ ಸಂಭ್ರಮದಲ್ಲಿರುವ ಬಿ. ಎಸ್.ಕೆ. ಬಿ. ಎಸೋಸಿಯೇಶನ್, ಗೋಕುಲ ನಡೆದು ಬಂದ ದಾರಿಯನ್ನು  ತಿಳಿಸಿದರು. 

ಸಪ್ತಾಹದ  ದಿವಸಗಳಲ್ಲಿ ಶ್ರೀಮದ್ ಭಾಗವತದ  ಪ್ರತಿ ಸ್ಕಂದಗಳಲ್ಲಿ ಉಲ್ಲೇಖಿತವಾದ,  ಧರ್ಮ ಸಂಸ್ಥಾಪನೆಗಾಗಿ ಭಗವಂತನೆತ್ತಿದ ಅವತಾರಗಳು, ಘೋರ ತಪಸ್ಸು ವಿಷ್ಣು, ಭಕ್ತಿ ಮಾರ್ಗದ ಮೂಲಕ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಪರಮ ಭಕ್ತರುಗಳಾದ  ಧ್ರುವ, ಪ್ರಹ್ಲಾದ,  ಅಂಬರೀಷ ಮುಂತಾದವರ ಚರಿತ್ರೆಗಳನ್ನು ದುಷ್ಟ ಸಂಹಾರ, ಧರ್ಮ  ಸಂಸ್ಥಾಪನೆಗಾಗಿಯೇ ಅವತಾರವೆತ್ತಿದ,  ಶ್ರೀ ಕೃಷ್ಣನ  ಬಾಲ ಲೀಲೆಗಳು,  ಗೋವರ್ಧನ  ಗಿರಿಧಾರಿಯಾಗಿ,  ಕಾಳಿಯ ಮರ್ದನನಾಗಿ,   ರಾಕ್ಷಸ ಕುಲ ಕುಠಾರನಾಗಿ, ಮಹಾಭಾರತದುದ್ದಕ್ಕೂ ಪಾಂಡವರ ರಕ್ಷಕನಾಗಿ ನಿಂತ ಭಗವಂತನ  ವರ್ಣಮಯ ವ್ಯಕ್ತಿತ್ವ /ಲೀಲೆಗಳನ್ನು ರಸವತ್ತಾಗಿ  ವರ್ಣಿಸುತ್ತಾ ಭಕ್ತಿಮಾರ್ಗದ ಮಹತ್ವವನ್ನು ವಿಶೇಷ ವ್ಯಾಖ್ಯಾನ, ದೃಷ್ಟಾಂತಗಳೊಂದಿಗೆ ಹಾಗೂ   ಭಾಗವತದ ಮೇಲಿನ  ಆನಂದ ತೀರ್ಥ  ಶ್ರೀಮದಾಚಾರ್ಯರ  ವಿಶೇಷ ನಿರ್ಣಯಗಳನ್ನು  ಅತ್ಯಂತ ಅದ್ಭುತವಾಗಿ  ವಿವರಿಸಿ ಸಭಾಗೃಹದಲ್ಲಿ ಕಿಕ್ಕಿರಿದು ನೆರೆದ ಭಗವದ್ಭಕ್ತರಿಗೆ ತಮ್ಮ ಅಸ್ಖಲಿತ ಕಂಠದಿಂದ ವಿವರಿಸುತ್ತಾ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿದರು. ಸಪ್ತಾಹದ ಮಂಗಳಾನುಗ್ರಹದಲ್ಲಿ, ಶ್ರೀಮದ್ ಭಾಗವತ ಶ್ರವಣದ ಫಲ ಶ್ರುತಿಯನ್ನು ತಿಳಿಸುತ್ತಾ ಜನ್ಮ ಜನ್ಮಾಂತರದಲ್ಲಿಯೂ ಭಗವನ್ನಾಮ ಸ್ಮರಣೆ ಮಾಡುವ, ಸತ್ಕರ್ಮಗಳನ್ನು ಮಾಡುವ ಪ್ರೇರಣೆ ಭಗವಂತ ನಮಗೆ ಅನುಗ್ರಹಿಸಲಿ, ಸರ್ವರಿಗೂ ಮಂಗಳವಾಗಲಿ ಎಂದು ಪ್ರಾರ್ಥನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.  ವೇ.ಮೂರ್ತಿ ಕೃಷ್ಣರಾಜ ತಂತ್ರಿಯವರು, ಏಳು ದಿನಗಳ ಕಾಲ ಅಮೋಘವಾಗಿ ಆಧ್ಯಾತ್ಮ ಜ್ಞಾನೋಪದೇಶ ಮಾಡಿದ ಶ್ರೀಪಾದಂಗಳವರಿಗೆ ಗೋಕುಲದ ಪರವಾಗಿ  ಶತ ಶತ ಧನ್ಯವಾದಗಳನ್ನು ಸಮರ್ಪಿಸಿದರು. 

ಅಂದಿನ ವಿಶೇಷ ಕಾರ್ಯಕ್ರಮವಾಗಿ ಶ್ರೀ ಶ್ರೀಯವರ ಅಭಿಮಾನಿ,  ರಾಷ್ಟ್ರೀಯ ಪುರಸ್ಕಾರ ವಿಜೇತ,  ಪಂಡಿತ್ ಜಯತೀರ್ಥ ಮೇವುಂಡಿಯವರು ಭಜನ್ ಸಂಧ್ಯಾ ಹರಿನಾಮ ಸಂಕೀರ್ತನೆ ಸೇವೆ ಸಲ್ಲಿಸಿ ಕೃತಾರ್ಥರಾದರು.  ಈ ಮಧ್ಯೆ ಏಕಾದಶಿಯ ದಿನವಾದ ರವಿವಾರ ನೂರಾರು ಜನರಿಗೆ ಮುದ್ರಾ ಧಾರಣೆಯನ್ನು  ಕೂಡಾ ಮಾಡಿ ಧನ್ಯರಾಗಿಸಿದರು.

ಪ್ರವಚನ ಮಂಗಳವಾದ ಬಳಿಕ ಅಧ್ಯಕ್ಷರು, ಪದಾಧಿಕಾರಿಗಳು, ಸಪ್ತಾಹದ ಪ್ರಾಯೋಜಕರು ಸ್ವಾಮೀಜಿಯವರಿಗೆ ಶಾಲು ಹೊದಿಸಿ, ತುಳಸಿ ಹಾರ, ಫಲಕಾಣಿಕೆಗಳೊಂದಿಗೆ ಗೌರವಾರ್ಪಣೆ ಗೈದು, ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದು ಅನುಗ್ರಹಿತರಾದರು.  ಸ್ವಾಮೀಜಿಯವರು,  ಅಧ್ಯಕ್ಷರು ಡಾ. ಸುರೇಶ್  ಎಸ್ ರಾವ್,  ಪದಾಧಿಕಾರಿಗಳು ಹಾಗೂ ಪ್ರಾಯೋಜಕರಿಗೆ ಶಾಲು ಹೊದಿಸಿ ಫಲ ಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು.  ಅಂದು ನೆರೆದ ಸುಮಾರು 400 ಅಧಿಕ ಭಕ್ತಾದಿಗಳಿಗೆ ಸ್ವಾಮೀಜಿಯವರು ಫಲ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು. ಪ್ರವಚನದ ಪ್ರತಿ ನಿತ್ಯವೂ ಉಪಹಾರದ ಹಾಗೂ ಯು ಟ್ಯೂಬ್ ಮುಖಾಂತರ  ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಗೋಕುಲ ಆಯೋಜಿಸಿತ್ತು.     

ಶ್ರೀಮದ್ ಭಾಗವತ ಪ್ರವಚನದ ಅಂಗವಾಗಿ ಅದಕ್ಕೆ ಸಂಬಂಧಪಟ್ಟ ವಿವಿಧ ಹೋಮ/ಹವನಾದಿಗಳನ್ನು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ 18.6.2025 ರಿಂದ 24.6.2025ರ ವರೆಗೆ (ಏಕಾದಶಿ ಹೊರತು ಪಡಿಸಿ)  ಆಯೋಜಿಸಿತ್ತು. ಪ್ರಧಾನ ಪುರೋಹಿತರಾದ ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ನೇತೃತ್ವದಲ್ಲಿ,  ವಾಸುದೇವ ಮಂತ್ರ ಹೋಮವು  ಶ್ಯಾಮಲಾ ಮತ್ತು ಅವಿನಾಶ್ ಶಾಸ್ತ್ರಿ ದಂಪತಿಯವರ ಪ್ರಾಯೋಜಕತ್ವದಲ್ಲಿ, ಅಷ್ಟಾಕ್ಷರ ಮಂತ್ರ ಹೋಮವು ಮೀರಾ ಮತ್ತು    ಜಗದೀಶ್ ಆಚಾರ್ಯ  ದಂಪತಿ ಪ್ರಾಯೋಜಕತ್ವದಲ್ಲಿ, ನಾಮತ್ರಯ ಜಪ ಹೋಮವು ರಾಧಾಲಕ್ಷ್ಮಿ ಮತ್ತು ಡಾ. ಚಂದ್ರಶೇಖರ್ ದಂಪತಿ ಮತ್ತು  ಸುದರ್ಶನ್ ಬಾಲ  ದಂಪತಿ  ಪ್ರಾಯೋಜಕತ್ವ,  ಪುರುಷಸೂಕ್ತ ಹೋಮ ವಿನೋದಿನಿ ಮತ್ತು  ರಾಜೇಶ್ ರಾವ್ ದಂಪತಿ ಪ್ರಾಯೋಜಕತ್ವ  ಶ್ರೀ ಕೃಷ್ಣ ಷಡಕ್ಷರ ಮಂತ್ರ ಹೋಮವು ಶ್ಯಾಮ ಮತ್ತು ವಿಜಯ ಆಚಾರ್ಯ ದಂಪತಿ ಹಾಗೂ ಜಗದೀಶ್ ಕಾಮತ್ ದಂಪತಿ ಪ್ರಾಯೋಜಕತ್ವ,  ಸುಕೃತ ಹೋಮವು ಶಾಂತಲಾ ಮತ್ತು ಶ್ರೀನಿವಾಸ್ ಉಡುಪರವರ ಪ್ರಾಯೋಜಕತ್ವದಲ್ಲಿ ವಿಧಿವತ್ತಾಗಿ ನೆರವೇರಿತು. ಭಾಗವತ ಸಪ್ತಾಹ  ಹೋಮಗಳ ಉದ್ಯಾಪನ ಹೋಮವು ಕೊನೆಯ ದಿನದಂದು  ಗೌ. ಕಾರ್ಯದರ್ಶಿ ಅನಂತ ಪದ್ಮನಾಭ ಪೆÇೀತಿ, ಸಹನಾ ಪೋತಿ  ದಂಪತಿ ಯಜಮಾನತ್ವದಲ್ಲಿ ವೇ.ಮೂ. ಪ್ರಕಾಶ್ ಆಚಾರ್ಯರವರ ಪೌರೋಹಿತ್ಯದಲ್ಲಿ ನೆರವೇರಿತು. ಪ್ರತಿ ದಿನವೂ   ಪೂರ್ಣಾಹುತಿ, ಮಂಗಳಾರತಿಯ ನಂತರ ಪುರೋಹಿತ ವರ್ಗದವರು ಸಪ್ತಾಹ ಹೋಮಗಳ ಪ್ರಾಯೋಜಕರಿಗೆ ಶಾಲು ಹೊದಿಸಿ, ಫಲ ಮಂತ್ರಾಕ್ಷತೆಗಳೊಂದಿಗೆ ಆಶೀರ್ವದಿಸಿದರು.  ಭಾಗವತ ಸಪ್ತಾಹದ ಅಂಗವಾಗಿ ಏಳೂ ದಿನಗಳು ಉಡುಪಿಯಿಂದ ಆಗಮಿಸಿದ ವೇದಮೂರ್ತಿ ಶ್ರೀನಿವಾಸ್ ಭಟ್ ರವರಿಂದ ಭಾಗವತ ಪಾರಾಯಣವು  ಶ್ರೀ ಕೃಷ್ಣ ಸನ್ನಿಧಿಯಲ್ಲಿ ಜರಗಿತು.