ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಕಳೆದ ಆರೇಳು ತಿಂಗಳುಗಳಿಂದ ಹಲವಾರು ಬಾರಿ ಮೂಡುಬಿದಿರೆ ಪುರಸಭಾ ಆಡಳಿತದ, ಶಾಸಕರ ಗಮನವನ್ನು ಬಸ್ಸು ನಿಲ್ದಾಣದ ಕೊರತೆಗಳ ಬಗ್ಗೆ ನಿರಂತರವಾಗಿ ಸೆಳೆಯಲಾಗಿತ್ತು. ಆದರೆ ಶಾಸಕರು, ಮಾಜಿ ಶಾಸಕರು, ಮುಂದಾಳುಗಳು ಆಸಕ್ತಿ ವಹಿಸದ ಕಾರಣ ಪುರಸಭಾ ಅಧಿಕಾರಿಗಳೂ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ.

ಅರೆ ಬರೆ ನಿವಾರಣೆ:- ಪಶ್ಚಿಮ -ದಕ್ಷಿಣ ಭಾಗದ ಹಳೆಯ ನೀರು ಒದಗಣೆಯ ಕಟ್ಟಡ ಅರೆ ಬರೆ ಬಿದ್ದು ಹಾಗೆ ಉಳಿದು ಅದರ ನಿವಾರಣೆ ಆಗಿಲ್ಲ.

ಈಗಿನ ಶಾಸಕರ ಫೋಟೋ ಇರುವ ಕುಡಿಯುವ ನೀರಿನ ವ್ಯವಸ್ಥೆಯಿಂದ ಸದಾ ನೀರು ಹೊರ ಹರಿಯುತ್ತಿರುತ್ತದೆ.

ಕುಡಿಯುವ ನೀರು ಪೋಲು:-ಬಸ್ಸು ನಿಲ್ದಾಣದ ಉತ್ತರ ಬದಿಯ ಆಗಮನದ ಪ್ರದೇಶದ ಬದಿಯಲ್ಲಿ ರಿಕ್ಷಾ ನಿಲ್ದಾಣದ ಎದುರಿನಲ್ಲಿ ಕುಡಿಯುವ ನೀರಿನ ಪೈಪ್ ನಿರಂತರವಾಗಿ ಕಳೆದ ಎರಡು ತಿಂಗಳಲ್ಲಿ ನಾಲ್ಕನೇ ಬಾರಿಗೆ ಒಡೆದು ಇಂದು ಕಾರಂಜಿಯಂತೆ ಕುಡಿಯುವ ನೀರು ಚಿಮ್ಮುತ್ತಿದೆ.

ಬ‌ಸ್ಸು ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ:- ಕಳೆದ ಎರಡು ತಿಂಗಳಿಂದ ಪುರಸಭಾ ಮೀಟಿಂಗ್ ನಲ್ಲಿ ವಾಗ್ಯುದ್ಧಕ್ಕೆ ಕಾರಣವಾಗಿದ್ದ ಬಸ್ಸು ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯುತ್ತಿದೆ. ನಾರಾವಿ, ಶಿರ್ತಾಡಿ, ಇರುವೈಲು ಪ್ರದೇಶದ ಬಸ್ಸುಗಳಿಗಾಗಿ ಮೀಸಲಾಗಿದ್ದ ಪ್ರದೇಶದಲ್ಲಿ ಖಾಸಗಿ ವಾಹನಗಳೇ ತುಂಬಿದ್ದು ಸದಾ ಚಾಲಕರು, ನಿರ್ವಾಹಕರು ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇತ್ತೀಚೆಗೆ ಇತರ ಪ್ರದೇಶಕ್ಕೆ ಚಲಿಸುವ ಬಸ್ಸಿನ ತಂಗುದಾಣದಲ್ಲಿ, ಬಸ್ ನಿಲ್ದಾಣದ ಮಧ್ಯೆ ಕೂಡ ಖಾಸಗಿ ವಾಹನಗಳು ಲಂಗರು ಹಾಕಿರುವುದು ಕಂಡುಬರುತ್ತದೆ. ಒಟ್ಟಿನಲ್ಲಿ ಬಸ್ ನಿಲ್ದಾಣವನ್ನು ಖಾಸಗಿ ವಾಹನಗಳ ತಂಗುದಾಣ ಎಂದು ಬದಲಾಯಿಸುವುದು ಸೂಕ್ತ ಎಂದು ಪ್ರಯಾಣಿಕರು, ಚಾಲಕರು, ನಿರ್ವಾಹಕರು ಆಡಿಕೊಳ್ಳುತ್ತಿದ್ದಾರೆ. ಏಕೆಂದರೆ ಪ್ರಯಾಣಿಕರಿಗಾಗಿ ಇರುವ ತಂಗುದಾಣ ಹೊಂಡ-ಗುಂಡಿಯಿಂದ ಇದ್ದು ಈಬಗ್ಗೆ ಕೂಡಾ ಹಲವಾರು ಬಾರಿ ಎಚ್ಚರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಹಲವಾರು ಬಾರಿ ಮಕ್ಕಳು, ವಿಶೇಷ ಚೇತನರು ಈ ಹೊಂಡ ಗುಂಡಿ ಯಿಂದಾಗಿ ಬಿದ್ದು ಉಳಿದವರು ಸಂಭಾಳಿಸಿದ ಪ್ರಸಂಗವೂ ನಡೆದಿದೆ. 

ಇದೆಲ್ಲವನ್ನೂ ಕಂಡೂ ಕಾಣದಂತೆ ಇರುವ, ಕೇವಲ ಉದ್ಘಾಟನೆಯಲ್ಲಿಯೇ ಕಾಲ ಕಳೆಯುತ್ತಿರುವ, ವಾಹನಗಳಲ್ಲೇ ತಿರುಗುವ ನೇತಾರರುಗಳಿಗೆ ಸಾಮಾನ್ಯರ ಕಷ್ಟ ಅರ್ಥವಾಗುವುದಿಲ್ಲ. ಇನ್ನಾದರೂ ಸಾಮಾನ್ಯರೊಂದಿಗೆ ಸಾಮಾನ್ಯರಂತೆ ತಿರುಗಾಡುವವರನ್ನೇ ನೇತಾರರೆಂದು ಆರಿಸಿ.