ಉಜಿರೆ: ಕ್ರೀಡಾಪಟುಗಳು ತಮಗೆ ಸಿಗುವ ಸಮಯ ಮತ್ತು ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯ್ಯಾತ ಕ್ರೀಡಾಪಟು ಯೇಸುದಾಸ್ ಪಿ.ಟಿ. ಹೇಳಿದರು. ಅವರು ಬುಧವಾರ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಂಗಳೂರು ವಿ.ವಿ. ಅಂತರ್ ಕಾಲೇಜು ಪುರುಷರ ವಾಲಿಬಾಲ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಪ್ರತಿಭಾವಂತರಾಗಿದ್ದು ಸತತ ಅಭ್ಯಾಸ ಮತ್ತು ನಿರಂತರ ಪ್ರಯತ್ನದಿಂದ ಉನ್ನತ ಸಾಧನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ತಾನು ವಿದ್ಯಾರ್ಥಿಯಾಗಿದ್ದಾಗ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಕಾಲೇಜು ಹಾಗೂ ಆಡಳಿತ ಮಂಡಳಿಯಿಂದ  ನೀಡಿದ ಸಕಾಲಿಕ ಮಾರ್ಗದರ್ಶನ, ತರಬೇತಿ ಮತ್ತು ಪ್ರೋತ್ಸಾಹವನ್ನು ಧನ್ಯತೆಯಿಂದ ಸ್ಮರಿಸಿದರು.

ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ವೀಕ್ಷಕ ರಮೇಶ್ ಮಾತನಾಡಿ, ದೇಶದಲ್ಲಿರುವ 28 ವಿ.ವಿ. ಗಳಲ್ಲಿ ಮಂಗಳೂರು ವಿ.ವಿ. ಕ್ರೀಡಾ ಕ್ಷೇತ್ರದ ಸಾಧನೆಯಲ್ಲಿ 6ನೇ ಸ್ಥಾನದಲ್ಲಿದೆ. ಇದಕ್ಕೆ ಎಸ್.ಡಿ.ಎಂ. ಕಾಲೇಜಿನ ಕ್ರೀಡಾಪಟುಗಳ ಕೊಡುಗೆ ಅಪಾರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಕುಮಾರ ಹೆಗ್ಡೆ ಮಾತನಾಡಿ ಸಾವಿರಾರು ಕ್ರೀಡಾಪಟುಗಳಿಗೆ ಆಡಳಿತ ಮಂಡಳಿ ವತಿಯಿಂದ  ಉಚಿತ ಊಟ, ವಸತಿಯೊಂದಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್., ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ರಮೇಶ್ ಎಚ್. ಮತ್ತು ಶಾರದಾ ಉಪಸ್ಥಿತರಿದ್ದರು. ಪ್ರೊ. ಸುವೇರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ.