ಮುಂಬಯಿ, ಜೂ.03: ಕನ್ನಡ ಮಿತ್ರರು ಯುಎಇ ಸಂಘಟನೆಯ ನೇತೃತ್ವದ, ವಿಶ್ವದ ಅತಿದೊಡ್ಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ `ಕನ್ನಡ ಪಾಠ ಶಾಲೆ ದುಬೈ' ತನ್ನ 10ನೇ ವಾರ್ಷಿಕ ಶೈಕ್ಷಣಿಕ ಸಮಾರೋಪ ಮತ್ತು ದಶಮಾನೋತ್ಸವವನ್ನು ಇತ್ತೀಚೆಗೆ ದುಬೈನ ಇಂಡಿಯನ್ ಅಕಾಡೆಮಿಯ ಸಭಾಗೃಹದಲ್ಲಿ  ಅದ್ದೂರಿಯಾಗಿ  ನಡೆಸಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದೈನಿಕದ ಮುಖ್ಯ ಸಂಪಾದಕ ರವಿ ಹೆಗಡೆ, ಅತಿಥಿ ಅಭ್ಯಾಗತರುಗಳಾಗಿ ಕರ್ನಾಟಕ ಅನಿವಾಸಿ ಭಾರತೀಯ ಯುಎಇ ಅಧ್ಯಕ್ಷ ಪ್ರವೀಣ್‍ ಕುಮಾರ್ ಶೆಟ್ಟಿ ವಾಕ್ವಾಡಿ ಹಾಗೂ ಉಪಾಧ್ಯಕ್ಷ ಮೋಹನ್ ನರಸಿಂಹಮೂತಿ, ಕರ್ನಾಟಕ ಪ್ರಜಾಶಕ್ತಿ ಸಮಿತಿಯ ರಾಜ್ಯಾಧ್ಯಕ್ಷ  ಡಾ| ವಿಶ್ವನಾಥ್.ಜೆ.ಪಿ,   ಭೀಮ ಜ್ಯುವೆಲ್ಲರ್ಸ್‍ನ ಮುಖ್ಯಸ್ಥ ಯು.ನಾಗರಾಜ ರಾವ್, ಕರ್ನಾಟಕ ಸಂಘ ದುಬೈ ಇದರ ಮಹಾ ಪೋಷಕ ಡಾ| ಬಿ.ಕೆ.ಯುಸೂಫ್, ಆಕ್ಮೆ ಸಂಸ್ಥೆಯ ಮುಖ್ಯಸ್ಥ ಹರೀಶ್ ಶೇರಿಗಾರ್, ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ದುಬೈ ಮುಖ್ಯಸ್ಥ ಗೋವಿಂದ ನಾಯ್ಕ ಪಾಲ್ಗೊಂಡಿದ್ದರು. ಅತಿಥಿವರ್ಯರೆಲ್ಲರೂ ಕನ್ನಡ ಪಾಠ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶಾಲಾ ಬಳಗಕ್ಕೆ ಶುಭ ಹಾರೈಸಿದರು.

ರವಿ ಹೆಗಡೆ ಮಾತನಾಡಿ ದೂರದ ಅರಬ್ಬರ ನಾಡಿನಲ್ಲಿ ಕನ್ನಡ ಕಟ್ಟುವ ಕನ್ನಡ ಮಿತ್ರರ  ಪ್ರಯತ್ನವನ್ನು ಅಭಿನಂದಿಸಿ ಕನ್ನಡ ಪಾಠಶಾಲೆಯ ಎಲ್ಲ ಪ್ರಯತ್ನಗಳಿಗೆ  ಬೆಂಬಲ ಸೂಚಿಸಿದರು.  

ಇತ್ತೀಚಿನ ದಿನಗಳಲ್ಲಿನ ಮಾತೃ ಭಾಷಾ ತಾತ್ಸಾರದ ಕುರಿತು ಬೆಳಕು ಚೆಲ್ಲುತ್ತಾ ಮಕ್ಕಳಿಗೆ  ಮಾತೃ ಭಾಷೆಯ  ಮಹತ್ವದ ಬಗ್ಗೆ ಹೆಚ್ಚು ತಿಳಿಸಿಕೊಡುವಂತೆ ಗೋವಿಂದ ನಾಯ್ಕ್  ಕರೆ ನೀಡಿದರು. 

ಕನ್ನಡ ಮಿತ್ರರು ಯುಎಇ ಸ್ಥಾಪಕ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಪ್ರಾಸ್ತವನೆಗೈದು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ  ಶಿವರಾಜ್ ತಂಗಡಿಗಿ ಅವರ ಕನ್ನಡ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕನ್ನಡ ಪಾಠ ಶಾಲೆ ದುಬೈ ಸಂಸ್ಥೆಗ ಮಾನ್ಯತೆ ನೀಡಿದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿವಂದನೆ ಸಲ್ಲಿಸಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಶ್ ಹಾನಗಲ್ಲ ಅವರ ಸಹಕಾರಕ್ಕಾಗಿ ವಂದಿಸಿದರು. ಮುಂದಿನ ದಿನಗಳಲ್ಲಿ ಗಲ್ಫ್ ಪ್ರಾಂತ್ಯದಲ್ಲಿ ಕನ್ನಡ ಕಲಿಕೆ ಮಾಡಿದ ಮಕ್ಕಳಿಗೆ "ಕನ್ನಡ ಸಾಹಿತ್ಯ ಪರಿಷತ್ತಿನ" ಪ್ರವೇಶ, ಕಾವ, ಜಾಣ, ರತ್ನ ಎಂಬ 4 ಹಂತದ ಪರೀಕ್ಷೆಗೆ ಅನುವಾಗುವಂತೆ ದುಬೈನಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯುವ ಬಗ್ಗೆ ಕಸಾಪ ಅಧ್ಯಕ್ಷ ಡಾ| ಮಹೇಶ್ ಜೋಷಿ ಅವರೊಂದಿಗೆ  ಸಂಪರ್ಕದಲ್ಲಿರುವ ಬಗ್ಗೆ ತಿಳಿಸಿದರು. ಕರ್ನಾಟಕ ಅನಿವಾಸಿ ಭರತೀಯ ಸಮಿತಿ  ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಅವರು ಕನ್ನಡ ಪಾಠ ಶಾಲೆ ದುಬೈಗೆ ತಮ್ಮ ಸರ್ಕಾರದ ಬೆಂಬಲ ಮತ್ತು ಮುಂದಿನ ದಿನಗಳಲ್ಲಿ ಸಹಾಯ ನೀಡುವ ಭರವಸೆ ನೀಡಿರುವುದಾಗಿ ತಿಳಿಸಿದರು. ದಶಮಾನೊತ್ಸವ ಸಮಾರಂಭಕ್ಕೆ  ಪ್ರೋತ್ಸಹಿಸಿದ ಪ್ರಾಯೋಜಕರು ಮತ್ತು ಹಿತೈಷಿಗಳಿಗೆ ಕೃತಜ್ಞತೆ ತಿಳಿಸಿದರು.

ಸಮಾರಂಭದಲ್ಲಿ ಕನ್ನಡ ಮಿತ್ರರು ಯುಎಇ ಸಂಸ್ಥೆಯ ಘಟನೆಯ ಈ ಬಾರಿಯ ವಾರ್ಷಿಕ `ಕನ್ನಡ ಮಿತ್ರ'  ಪ್ರಶಸ್ತಿಯನ್ನು ತಮ್ಮ ಊರಿನ ಸರ್ಕಾರಿ ಶಾಲೆಗೆ ತಮ್ಮ ಒಂದು ಎಕರೆ ಜಮೀನು ದಾನ ನೀಡಿರುವ ಅಬ್ದುಲ್ ಲತೀಫ್ ಎಸ್.ಎಂ.ಜಹಗಿದಾರ್ ಅವರಿಗೆ ಹಾಗೂ ಕನ್ನಡ ಪಾಠ ಶಾಲೆ ದುಬೈ ಇದರ ಮಹಾ ಪೋಷಕರಾಗಿ ದಶವರ್ಷ ಸೇವೆ ಸಲ್ಲಿಸಿದ ಪ್ರವೀಣ್‍ಕುಮಾರ್ ಶೆಟ್ಟಿ ವಾಕ್ವಾಡಿ ಮತ್ತು ಮೋಹನ್ ನರಸಿಂಹಮೂರ್ತಿ ಅವರಿಗೆ `ಕನ್ನಡ ರತ್ನ' ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. 

ಗುರು ವಂದನಾ ಕಾರ್ಯಕ್ರಮವಾಗಿಸಿ ಶಾಲೆಗೆ ನಿಸ್ವಾರ್ಥವಾಗಿ ಒಂದು ದಶಕದಿಂದ ಶಿಕ್ಷಕಿಯರಾಗಿ ವೇತನ ರಹಿತ ಸೇವೆ ಸಲ್ಲಿಸಿದ ರೂಪಾ ಶಶಿಧರ್ ಮತ್ತು ಶಿಲ್ಪಾ ಸಿದ್ದಲಿಂಗೇಶ್ ಅವರಿಗೆ "ದಶಕದ ಶಿಕ್ಷಕಿ" ಬಿರುದು ಪ್ರದಾನಿಸಿ, ಅಂತೆಯೇ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಕ್ಷಿಯರಾಗಿ ವೇತನ ರಹಿತ ಸೇವೆ ಸಲ್ಲಿಸಿದ ಮಾನಸ ನವೀನ್ ಹೆಗಡೆ, ಮಂಜುಳ ಪ್ರಕಾಶ್ ಬಾಗಿ, ದೀಪ ಸೋಮಶೇಖರ್ ತೇಜಸ್ವಿ, ವಿನುತ ಸುರೇಶ್ ಮಾಸೂರ್ ಮತ್ತು ಬಿಂದು ಮಾದೇವಪ್ಪ ಕೊಪ್ಪಳ ರವರಿಗೆ "ಶಿಕ್ಷಣ ಕೌಸ್ತುಭ" ಬಿರುದು ಪ್ರದಾನಿಸಿ, ಇನ್ನುಳಿದ 11 ಶಿಕ್ಷಕಿಯರಿಗೆ "ವರ್ಷದ ಶಿಕ್ಷಕಿ" ಬಿರುದು ಪ್ರದಾನಿಸಿ ಸನ್ಮಾನಿಸಲಾಯಿತು.

ಡಾ| ಫ್ರಾಂಕ್ ಡೇವಿಡ್ ಫೆರ್ನಾಂಡೀಸ್, ಹರೀಶ್ ಬಂಗೇರ, ಅಬ್ದುಲ್ ಲತೀಫ್ ಮೂಲ್ಕಿ, ಮಲ್ಲಿಕಾರ್ಜುನ ಗೌಡ, ಸುಚಿತ್ ಕುಮಾರ್, ಹರೀಶ್ ಯು.ಪಿ, ಇಶ್ವರಿದಾಸ್ ಶೆಟ್ಟಿ, ಉಮಾ ವಿದ್ಯಾಧರ, ಬಾಲಕೃಷ್ಣ ಸಾಲಿಯಾನ್, ಮೆಘನಾ ಮತ್ತು ಸಾಗರ್ ಶೆಟ್ಟರ್,  ಡಾ.ರಶ್ಮಿ ನಂದಕಿಶೋರ್, ಮೊನಿಕಾ ಮಂದಣ್ಣ, ಸರ್ವೊತ್ತಮ ಶೆಟ್ಟಿ, ಸತೀಶ್ ಪೂಜಾರಿ, ರಾಜೇಶ್ ಕುತ್ತಾರ್, ಶೋಧನ್ ಪ್ರಸಾದ್, ಸುಗಂಧರಾಜ್ ಬೇಕಲ್, ಕಿರಣ್ ಗೌಡ, ನಿತ್ಯಾನಂದ ಬೆಸ್ಕೂರ್, ಇರ್ಶಾದ್ ಮೂಡಬಿದ್ರೆ, ವಾಸುದೇವ ಶೆಟ್ಟಿ, ಸಿದ್ದೇಶ್ ಗೌಡ, ಸತೀಶ್ ಹೆಗ್ಡೆ, ವಿಶ್ವನಾಥ್ ಶೆಟ್ಟಿ, ಮಂಜುನಾಥ್ ಸ್ವಾಮಿ ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ವಿಶೇಷ ಅಹ್ವಾನಿತರಾಗಿ ಉಪಸ್ಥಿತರಿದ್ದು ಶಾಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಶುಭಾರೈಸಿದರು.

ಕನ್ನಡ ಮಿತ್ರರು ಯುಎಇ ಕಾರ್ಯದರ್ಶಿ ಸುನೀಲ್ ಗವಾಸ್ಕರ್ ಸ್ವಾಗತಿಸಿದರು. ಉಪಾಧ್ಯಕ್ಷ ಸಿದ್ದಲಿಂಗೇಶ್ ಸಂಸ್ಥೆಯ ಒಂದು ದಶಕದ ಕನ್ನಡ ಕಲಿಕೆಯ ಬಗ್ಗೆ ವಿವರ ನೀಡಿದರು. ಸಂಘಟನಾ ಕಾರ್ಯದರ್ಶಿ   ವಿಜಯ್ ಕುಮಾರ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಂತೋಶ್ ಶ್ರೀಹರ್ಷ ಸಂಘಟನೆಯ ಸಮುದಾಯ ಸೇವೆಯನ್ನು ತಿಳಿಸಿದರು. ಬಾನು ಕುಮಾರ್  ಅವರು "ಕಡಲಾಚೆಯಿಂ ಕರುನಾಡಿಗೆ" ಚತುರ ಶಾಲಾ ಯೋಜನೆಯಡಿ ಕನ್ನಡ ಮಿತ್ರರು ಯುಎಇ 2019 ರಿಂದ ಕರ್ನಾಟಕದ ಕನ್ನಡ ಮಾಧ್ಯಮ ಶಾಲೆಗಳಿಗೆ ಕಂಪ್ಯೂಟರ್, ಪರಿಕರ ದೇಣಿಗೆ ಬಗ್ಗೆ ಮಾಹಿತಿ ನೀಡಿದರು. 

ಯುಎಇ ಇಲ್ಲಿನ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಶಾಲಾ ವಿದ್ಯಾರ್ಥಿಗಳು ಕನ್ನಡದಲ್ಲಿ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಕಾವ್ಯ ಯುವರಾಜ್, ಬಿಂದು ಮಹದೇವ್ ಮತ್ತು  ಚೇತನಾ  ಗವಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ನಾಗರಾಜ್ ರಾವ್ ಉಡುಪಿ ಧನ್ಯವದಿಸಿದರು.