ತುಳುವಿನಲ್ಲಿ ದೀಪೊಲಿ ಎಂದರೆ ಭತ್ತದ ರಾಶಿ ಹಾಕು ಎಂದು ಅರ್ಥ. ದ್ರಾವಿಡ ಭಾಷೆ ಪರಿಗಣಿಸಿದರೆ ದೀಪ ಒಳಿ ಅರ್ಥಾತ್ ದೀಪದ ಬೆಳಕು ಎಂದು ಅರ್ಥ.

ಆದರೆ ತುಳುವರು ಮೊದಲ ದಿನ ಮಾಡುವುದು ಸತ್ತವರ ಹಬ್ಬ ಹಾಗಾಗಿ ಅವರು ಮೊದಲ ದಿನ ಹಚ್ಚುವ ಹಣತೆ ಸತ್ತವರ ನೆನಪಿಗೆ ಇಡುವ  ದೀಪವಾಗಿದೆ.

ತುಳುವರು ಮೊದಲ ದಿನ ಸಯ್ತಿನಕಲೆ ಸತ್ತವರ ಹಬ್ಬ ಆಚರಿಸಿದರೆ ಎರಡನೆಯ ದಿನ ಇತ್ತಿನಕಲೆ ಅಂದರೆ ಇರುವವರ ಹಬ್ಬ ಆಚರಿಸುತ್ತಾರೆ. ಅಂದಿನ ಹಣತೆಯಲ್ಲೂ ಸತ್ತವರ ನೆನಪು ಇರುತ್ತದೆ.

ಆದರೆ ಇರುವವರಿಗಾಗಿ ಇರುವ ಗದ್ದೆ, ಭತ್ತದ ರಾಶಿ ಸಂತೋಷ ಮೂಡಿಸಿ ಶೋಕವನ್ನು ದೂಡುತ್ತದೆ. ವಿಷ್ಣುವು ಆರ್ಯರ ಪರವಾಗಿ ಮೋಸ ಮಾಡಿ ದೂಡಿದ ತುಳುವರಸ ಬಲಿಯೇಂದ್ರರು ಬರುವ ದಿನವಾದ್ದರಿಂದ ಸಂತೋಷ, ಹಳೆಯ ನೋವು ಎಲ್ಲವೂ ಮೇಳವಿಸುತ್ತದೆ.

ಮೂರನೆಯ ದಿನ ತುಳುವರು ಬರ್ಪಿನಕಲೆ ಬರುವವರಿಗಾಗಿ ಹಬ್ಬ ಆಚರಿಸುತ್ತಾರೆ. ಸತ್ತವರು ಈಗಿಲ್ಲ, ಇರುವವರು ನಾಳೆ ಇರುವುದಿಲ್ಲ. ಹಾಗಾಗಿ ಮೂರನೆಯ ದಿನ ನಾಳಿನ ಬಾಳುವೆಯವರಿಗಾಗಿ ಹಬ್ಬ.

ಆದ್ದರಿಂದ ಅವರ ಬದುಕಿಗೆ ಒದಗುವ ಜಾನುವಾರು, ನೇಗಿಲು, ಕತ್ತಿಗೆಲ್ಲ ಗೌರವ ಸಲ್ಲುತ್ತದೆ. ಇಂದು ಬದುಕುವ ದಾರಿ ನೂರಾರು ಆದ್ದರಿಂದ ಅವರ ವೃತ್ತಿಗೆ ಸಂಬಂಧಿಸಿದ ವಸ್ತುಗಳಿಗೆ ಪೂಜೆ ನಡೆಯುತ್ತದೆ.