ಬೆಂಗಳೂರು: ಪ್ರತಿಷ್ಟಿತ ಕರ್ಣಾಟಕ ಬ್ಯಾಂಕ್ ಸಹ-ಸಾಲ ವಿತರಣೆಗಾಗಿ ‘ಸ್ಯಾಟಿನ್ ಕ್ರೆಡಿಟ್‍ಕೇರ್ ನೆಟ್‍ವರ್ಕ್ ಲಿಮಿಟೆಡ್'(ಎಸ್‍ಸಿಎನ್‍ಎಲ್) ನೊಂದಿಗೆ ಒಡಂಬಡಿಕೆಗೆ ಸಹಿ ಮಾಡಿದೆ. ಕರ್ಣಾಟಕ ಬ್ಯಾಂಕ್‍ನ ಎಂಡಿ ಹಾಗೂ ಸಿಇಓ  ಶ್ರೀಕೃಷ್ಣನ್ ಎಚ್ ಮತ್ತು ಎಸ್‍ಸಿಎನ್‍ಎಲ್‍ನ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್  ಎಚ್‍ಪಿ ಸಿಂಗ್ ಅವರು ಬೆಂಗಳೂರಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಎರಡೂ ಸಂಸ್ಥೆಗಳ ಸಣ್ಣಪ್ರಮಾಣದ (Retail) ಸಾಲಗಾರರಿಗೆ ಗ್ರಾಹಕ ಕೇಂದ್ರಿತ ಹಣಕಾಸು ಸೌಲಭ್ಯಗಳನ್ನು ನೀಡಲು ಅನುವು ಮಾಡಿಕೊಡುತ್ತದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಆರ್ಥಿಕವಾಗಿ ಸಕ್ರಿಯವಾಗಿರುವ ಮಹಿಳೆಯರ ಜಂಟಿ ಹೊಣೆಗಾರಿಕೆ ಗುಂಪುಗಳಿಗೆ (JLG) ಈ ಒಡಂಬಡಿಕೆಯಿಂದ ಸಹಾಯವಾಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಲ್ಲಾ ವಿಭಾಗಗಳಿಗೆ ಸಾಲದ ಹರಿವನ್ನು ಸುಧಾರಿಸಲು ಬ್ಯಾಂಕ್‍ಗಳು ಮತ್ತು ಎನ್‍ಬಿಎಫ್‍ಸಿಗಳು ಆದ್ಯತಾ ವಲಯಕ್ಕೆ ಸಹ-ಸಾಲ ನೀಡುವುದರ ಮೂಲಕ ಆರ್ಥಿಕ ವ್ಯವಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬಹುದು. 

ಈ ಒಡಂಬಡಿಕೆ ಕುರಿತು ಮಾತನಾಡಿದ ಕರ್ಣಾಟಕ ಬ್ಯಾಂಕ್‍ನ ಎಂಡಿ ಹಾಗೂ ಸಿಇಒ  ಶ್ರಿಕೃಷ್ಣನ್ ಹೆಚ್, "ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಫಿನ್‍ಟೆಕ್ ಕಂಪೆನಿಗಳೊಂದಿಗೆ ಬ್ಯಾಂಕ್ ಸಹಭಾಗಿತ್ವವನ್ನು ಹೊಂದಿದೆ. ಈ ಒಪ್ಪಂದವು ನಮ್ಮ ಡಿಜಿಟಲ್ ಪರಿವರ್ತನೆಯ ಪ್ರಯಾಣಕ್ಕೆ ಅನುಗುಣವಾಗಿದೆ. ಸ್ಯಾಟಿನ್ ಜೊತೆಗಿನ ನಮ್ಮ ಒಡಂಬಡಿಕೆಯು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ನಮ್ಮ ಮೈಕ್ರೋ ಕ್ರೆಡಿಟ್ ಸೌಲಭ್ಯಗಳನ್ನು ಸುಧಾರಿಸುತ್ತದೆ. ವಿವಿಧ ಗ್ರಾಹಕರನ್ನು ತಲುಪುವಲ್ಲಿ ಇದು ಬ್ಯಾಂಕಿಗೆ ಸಹಕಾರಿಯಾಗಿದೆ” ಎಂದು ನುಡಿದರು.

ಸಂದರ್ಭದಲ್ಲಿ ಸ್ಯಾಟಿನ್ ಕ್ರೆಡಿಟ್‍ಕೇರ್ ನೆಟ್‍ವರ್ಕ್ ಲಿಮಿಟೆಡ್‍ನ ಎಂಡಿ ಹಾಗೂ ಸಿಇಓ ಆಶಿಶ್ ಮೆಹ್ರೋತ್ರಾ ಅವರು "ಕರ್ಣಾಟಕ ಬ್ಯಾಂಕ್‍ನೊಂದಿಗಿನ ಈ ಒಡಂಬಡಿಕೆ ನಮಗೆ ಮಹತ್ವದ ಮೈಲಿಗಲ್ಲಾಗಿದೆ. ಬ್ಯಾಂಕಿಂಗ್ ರಂಗದಲ್ಲಿ ಡಿಜಿಟಲ್ ಸ್ಪರ್ಶವನ್ನು ಹೆಚ್ಚಿಸಿ, ಗ್ರಾಹಕರ ಅವಶ್ಯಕತೆಗಳಿಗೆ ವೇಗವಾಗಿ ಸ್ಪಂದಿಸಲು ಕರ್ಣಾಟಕ ಬ್ಯಾಂಕಿನ ಜೊತೆಗೆ ನಾವಿರಲು ಹೆಮ್ಮೆ ಪಡುತ್ತೇವೆ. ಈ ಒಡಂಬಡಿಕೆಯು ಧನಾತ್ಮಕ ಫಲಿತಾಂಶಗಳನ್ನು ನೀಡಲಿದೆ ಎಂಬ ಆತ್ಮವಿಶ್ವಾಸವಿದೆ" ಎಂದು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಎಕ್ಸೆಕ್ಯೂಟಿವ್ ಡೈರೆಕ್ಟರ್,  ಶೇಖರ್ ರಾವ್ "ಈ ಒಪ್ಪಂದವು ಎರಡು ಪಾಲುದಾರರಿಗೂ ಅನುಕೂಲವನ್ನು ಒದಗಿಸಲಿದೆ. ಇದು ವ್ಯಾಪಕವಾಗಿ ಗ್ರಾಹಕರ ಹಣಕಾಸಿನ ಅಗತ್ಯಗಳನ್ನು ಪೂರೈಸಲಿದೆ” ಎಂದು ಹೇಳಿದರು.