ಮಂಗಳೂರು:- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ನಮ್ಮ ಟಿ.ವಿಯ ಸಹಯೋಗದೊಂದಿಗೆ ಯಕ್ಷಗಾನ ಹಾಸ್ಯ ಕಲಾವಿದರ ಒಕ್ಕೂಟದ ಸಹಕಾರದೊಂದಿಗೆ ‘ಕೋವಿಡ್-19’ ನಿಂದ ಸಂಕಷ್ಟಕ್ಕೆ ಒಳಗಾದ ಯಕ್ಷಗಾನ ಹಾಸ್ಯ ಕಲಾವಿದರ ನೆರವಿಗಾಗಿ “ಆಟದ ಆಯನ’’ ಎಂಬ ವಿನೂತನ ಯಕ್ಷಗಾನ ಪ್ರದರ್ಶನದಲ್ಲಿ “ಸೊರ್ಕುದ ಪೊಣ್ಣು” ಎಂಬ ತುಳು ಯಕ್ಷಗಾನ ಪ್ರಸಂಗವನ್ನು ದಿನಾಂಕ 11.07.2020 ಶನಿವಾರ ಅಕಾಡೆಮಿಯ ಸಿರಿ ಚಾವಡಿಯಲ್ಲಿ ಆಯೋಜಿಸಲಾಯಿತು.
ಯಕ್ಷಗಾನ ಹಾಸ್ಯ ಕಲಾವಿದರ “ಆಟದ ಆಯನ’’ದ ಸರಣಿ 5 ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಉದ್ಘಾಟನೆ ಶನಿವಾರ ಬೆಳಿಗ್ಗೆ 10:00 ಗಂಟೆಗೆ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ಸಾರ್ ರವರ ಅಧ್ಯಕ್ಷತೆಯಲ್ಲಿ, ಯಕ್ಷಗಾನ ಗುರು ಎಲ್ಲೂರು ರಾಮಚಂದ್ರ ಭಟ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿ.ರಮಾನಾಥ ರೈ ಮಾಜಿ ಉಸ್ತುವಾರಿ ಸಚಿವರು, ಯಕ್ಷಗಾನ ಪ್ರಸಂಗಕರ್ತ ಜಿ. ಕೆ ಶ್ರೀನಿವಾಸ ಸಾಲ್ಯಾನ್ ಬೋಂದೆಲ್, ಉದ್ಯಮಿ ಅನಿಲ್ ಕಾವೂರು, ರಂಜಿತ್ ಸುವರ್ಣ ತುಳು ಚಲನಚಿತ್ರ ನಿರ್ದೇಶಕರು, ವಿದ್ಯಾಶ್ರೀ ಎಸ್.ಉಳ್ಳಾಲ್ ತುಳು ಲಿಪಿ ಶಿಕ್ಷಕಿ ಮತ್ತು ಅಕಾಡೆಮಿಯ ಮಾಜಿ ಸದಸ್ಯೆ, ಪತ್ರಕರ್ತರಾದ ನರೇಂದ್ರ ಕೆರೆಕಾಡ್, ಕಾರ್ಪೋರೇಟರ್ ಗಣೇಶ್ ಕುಲಾಲ್, ಅಕಾಡೆಮಿಯ ಸದಸ್ಯರಾದ ಚೇತಕ್ ಪೂಜಾರಿ ಭಾಗವಹಿಸಿದ್ದರು.
ಯಕ್ಷಗಾನ ಹಾಸ್ಯ ಕಲಾವಿದರ ಒಕ್ಕೂಟದ ‘’ಆಟದ ಆಯನ’’ ಸರಣಿ -5 ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ “ಆಟದ ಆಯನ’’ದ ರೂವಾರಿಗಳಾದ ಅಧ್ಯಕ್ಷರಾದ ಕೋಡಪದವು ದಿನೇಶ್ ಶೆಟ್ಟಿಗಾರ್, ಸಂಚಾಲಕರಾದ ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ, ಕಾರ್ಯದರ್ಶಿ ಯಕ್ಷಬೊಳ್ಳಿ ಕಡಬ ದಿನೇಶ್ ರೈ, ಬಹುಮುಖ ಪ್ರತಿಭೆಗಳ ಸರದಾರ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಪೂರ್ಣೇಶ್ ಆಚಾರ್ಯ ಇವರುಗಳನ್ನು ಗಣ್ಯರ ಉಪಸ್ಥಿತಿಯಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ದಾನಿಗಳ ಸಹಕಾರದೊಂದಿಗೆ ಕೋರೊನದಿಂದ ಸಂಕಷ್ಟಕ್ಕೀಡಾದ ಹಾಸ್ಯ ಕಲಾವಿದರಿಗೆ ಆಹಾರ ಸಾಮಾಗ್ರಿಗಳ ಕಿಟ್ ಹಾಗೂ ಗೌರವ ಧನ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು. ಪ್ರಶಾಂತ್ ಸಿ.ಕೆ ಅತಿಥಿಗಳನ್ನು ಸ್ವಾಗತಿಸಿ, ಅಕಾಡೆಮಿಯ ಸದಸ್ಯರಾದ ಕಡಬ ದಿನೇಶ್ ರೈ ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿದರು. ಯಕ್ಷ ಸಂಘಟಕರಾದ ಅಮ್ಮುಂಜೆ ಜನಾರ್ಧನ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.