ಇತ್ತೀಚೆಗೆ ಬಿಡುಗಡೆಯಾದ ಮಾರ್ಪಳ್ಳಿ ಆರ್. ಮಂಜುನಾಥ್ ರವರ ಪುಸ್ತಕ-ಗಣೇಶನ ಜನನ ನಾನಾ ಕಥನ- ಮಕ್ಕಳಿಗಾಗಿ ಎಂಬ ಶಿರೋನಾಮೆ ಹೊಂದಿದ್ದರೂ ಕೂಡಾ ದೊಡ್ಡವರಿಗೂ ಮಾರ್ಗದರ್ಶಕ ಕೃತಿಯಾಗಿದೆ. ಶಿವಮೊಗ್ಗದ ಶ್ರೀ ಮಹಾ ಗಣಪತಿ ಪ್ರಕಾಶನ ಹಾಗೂ ಕಿನ್ನಿಗೋಳಿಯ ಗಾಯತ್ರೀ ಪ್ರಕಾಶನದವರ ಜಂಟಿ ಸಹಭಾಗಿತ್ವದಲ್ಲಿ ಮೂಡಿಬಂದ ಈ ಕೃತಿ ಸುಂದರವಾದ ಮುಖ ಪುಟವನ್ನೂ ಹೊಂದಿದೆ. ಸ್ವತ: ಕೃತಿಕಾರರು ಹೇಳಿಕೊಂಡಂತೆ ನಾನಾ ಪುರಾಣಗಳಲ್ಲಿರುವ ಗಣೇಶನ ಜನ್ಮ ವೃತ್ತಾಂತವನ್ನು ಒಟ್ಟಾಗಿ ಈ ಹೊತ್ತಗೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದೇ ಒಂದು ಅಕ್ಷರ ತಪ್ಪೂ ಇರದಂತೆ ಶಿವಮೊಗ್ಗದ ಜೋಯ್ಸ್ ಬುಕ್ ಪ್ರಿಂಟರ್ಸ್ ರವರು ಸುಂದರವಾಗಿ ಮುದ್ರಿಸಿದ್ದಾರೆ.

ಸರ್ವಜನ, ಸಾರ್ವಜನಿಕ ಹಾಗೂ ಪ್ರಥಮ ಪೂಜಿತ ಗಣಪತಿ ಎಲ್ಲರಿಗೂ ವಿಘ್ನ ನಿವಾರಕನಾಗಿದ್ದಾನೆ. ಅಂತಹ ವಿಶೇಷ ವ್ಯಕ್ತಿತ್ವದ ಗಣಪನ ಆಕಾರದಂತೆಯೇ ಆತನ ಜನನವೂ ಬಹು ಚರ್ಚಿತ, ವಿಚಿತ್ರವಾದ್ದು. ಅಂತಹ ವಿಶೇಷ ಚರ್ಚಿತ ಅಂಶಗಳ ಬಗ್ಗೆ ಪುರಾಣದ ಆಧಾರ ಸಹಿತವಾದ ಅಂಶಗಳನ್ನು ಸಂಗ್ರಹಿಸಿ ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ. ಕೇವಲ 48 ಪುಟಗಳ ಕೃತಿಯಾದರೂ ಇದು ಸಂಗ್ರಹಯೋಗ್ಯ ಕೃತಿಯಾಗಿದೆ. ಇಲ್ಲಿ ಲೇಖಕರು ಬ್ರಹ್ಮ ವೈವರ್ತ, ಸ್ಕಂದ, ಸುಪ್ರಭೇದಾಗಮ, ಲಿಂಗ, ವಾಮನ, ಗಣೇಶ, ಶಿವ, ಪದ್ಮ, ವರಾಹ ಇತ್ಯಾದಿ ಎಲ್ಲ ಪುರಾಣಗಳೊಂದಿಗೆ ಶಿವ ರಹಸ್ಯದಿಂದಲೂ ಉದಾಹರಣೆಗಳನ್ನು ಉದ್ಧರಿಸಿ ಕೊಟ್ಟಿದ್ದಾರೆ.

ಪ್ರತಿಯೊಂದರಲ್ಲೂ ಘಟನೆಗಳು ಬೇರೆ ಬೇರೆಯಾದರೂ ಕೂಡಾ ಗಣೇಶ ಎಲ್ಲಾ ಕಡೆ ಅಗ್ರ ಪೂಜಿತ, ವಿಘ್ನ ನಿವಾರಕ, ಸಿದ್ಧಿದಾಯಕನು. ಯಾರು ಯಾವ ರೂಪದಲ್ಲಿ, ಯಾವ ಮನೋಭಾವದಿಂದ ಯೋಚಿಸಿದರೂ, ಅದೇ ಮನೋಭಾವದ; ಯೋಜನೆಯಂತೆ ಮಕ್ಕಳ ಜನನವಾಗುತ್ತದೆಂದು ಈ ಕಥೆಗಳು ಸ್ಫುರಿಸುತ್ತವೆ. ಇದು ವೈಜ್ಞಾನಿಕ ನಿಲುವೂ ಆಗಿದ್ದು ಇಂದಿಗೂ, ಮುಂದಿಗೂ ಸರಿ ಹೊಂದುವದಾಗಿದೆ. ಆದುದರಿಂದಲೇ ಇಂದಿಗೂ ಕೂಡಾ ಡಾಕ್ಟರರುಗಳೂ ಸಹ ಗರ್ಭಿಣಿಯರನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುವಂತೆಯೂ, ಅವರಿಗೆ ಬೇಸರ, ಹತಾಶೆ, ದು:ಖ ಉಂಟಾಗದಂತೆ, ತೋರಿಸದಂತೆ ವರ್ತಿಸಬೇಕೆಂದೂ ಹೇಳುವದೂ ಇದೇ ಉದ್ದೇಶದಿಂದ. ಏಕೆಂದರೆ ಗರ್ಭಿಣಿಯು ಎರಡು ಜೀವಗಳನ್ನು ಹೊಂದಿರುವದರಿಂದ ತಾಯಿಯ ಮನೋಭಾವ ಹುಟ್ಟುವ ಮಗುವಿನಲ್ಲೂ ಮೂಡುತ್ತದೆನ್ನುವ ವೈಜ್ಞಾನಿಕ ಕಾರಣ. ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಮಾರ್ಪಳ್ಳಿ ಆರ್. ಮಂಜುನಾಥ್ ರವರು ಒಂದು ಉತ್ತಮ, ವಿಚಾರ ಪ್ರಚೋದಿತ-ಸಂಗ್ರಾಹ್ಯ ಕೃತಿಯನ್ನು ಸಾಹಿತ್ಯ ಪ್ರಪಂಚಕ್ಕೆ  ನೀಡಿದ್ದಾರೆ. ಅವರ ಶ್ರಮ, ಆಸಕ್ತಿ, ಗಣೇಶನ ಬಗೆಗೆ ತಿಳಿಸಬೇಕೆಂಬ ತುಡಿತ ನಿಜಕ್ಕೂ ಸ್ತುತ್ಯರ್ಹ. ಅವರಿಗೆ, ಅವರ ಸಾಹಿತ್ಯ ಕೃಷಿಗೆ ಸದಾ ಗಣೇಶನ ಕೃಪೆ ಇರಲೆಂದು ಸದಾ ಶುಭ ಹಾರೈಕೆ.

ಲೇಖನ: ರಾಯೀ ರಾಜ ಕುಮಾರ್, ಮೂಡುಬಿದಿರೆ. 
(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು,