ಉಡುಪಿ (ಸೆಪ್ಟೆಂಬರ್, 29): ಉತ್ತರಕ್ಕಿಂತ ಭಿನ್ನವಾಗಿ ಕೃಷಿ ಮತ್ತು ಸಂತಾನೋತ್ಪತ್ತಿಯಲ್ಲಿ ಹೆಣ್ಣನ್ನು ಪ್ರಧಾನಪಾತ್ರದಲ್ಲಿಟ್ಟು ಗೌರವದಿಂದಲೇ ಕಂಡ ಹಾಗೂ ಗಣರಾಜ್ಯದಿಂದ ಸರ್ವಾಧಿಕಾರದ ಬದಲಿಗೆ ಕಲ್ಯಾಣರಾಜ್ಯದ ಕಡೆಗೆ ತಿರುಗಿದ ದಕ್ಷಿಣಪ್ರಜ್ಞೆಯ ಸಮರ್ಥ ದಾಖಲಿಸುವಿಕೆಯ ಜೊತೆಗೆ ರಾಜ ಮತ್ತು ಕವಿ ಇಬ್ಬರೂ ಹೇಗೆ ಜನರ ಆಶಯಕ್ಕೆ ಪೂರಕವಾಗಿಯೇ ಇರಬೇಕು ಎಂಬುದನ್ನು ಸ್ಪಷ್ಟವಾಗಿಯೇ ಮುಂದಿಟ್ಟ ಕವಿರಾಜಮಾರ್ಗವು ಕೇವಲ ಕಾವ್ಯಲಕ್ಷಣದ ಕೃತಿಯಲ್ಲ ಬದಲಾಗಿ ಒಂದು ರಾಜಕೀಯಶಾಸ್ತ್ರದ ಕೃತಿ ಎಂದು ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೋ. ಶಿವಗಂಗ ರುಮ್ಮ ಹೇಳಿದರು.
ಅವರು ತೆಂಕನಿಡಿಯೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಲೋಯೊಲಾ ಪದವಿ ಕಾಲೇಜು ಕನ್ನಡ ಸಂಘ ಜಂಟಿಯಾಗಿ ಆಯೋಜಿಸಿದ “ಕವಿರಾಜಮಾರ್ಗ : ಪ್ರಜಾಪ್ರಭುತ್ವ ಮತ್ತು ಬಹುತ್ವ“ ಎಂಬ ಒಂದು ದಿನದ ರಾಷ್ಟ್ರೀಯ ಅಂತರ್ಜಾಲ ವೆಬಿನಾರ್ನಲ್ಲಿ “ದಕ್ಷಿಣೋತ್ತರಮಾರ್ಗಗಳ ಸಾಂಸ್ಕøತಿಕ ವಿಶ್ಲೇಷಣೆ ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಡಾ .ಬಸವರಾಜ ಕೊಡಗಂಟಿ “ನುಡಿಗೆಲ್ಲಂ ಸಲ್ಲದ ಕನ್ನಡ”ಎಂಬ ವಿಷಯದ ಕುರಿತು ಮಾತನಾಡಿದರು.
ನಾಡಿನ ಹೆಸರಾಂತ ಚಿಂತಕರುಗಳಾದ ಬಂಜಗೆರೆ ಜಯಪ್ರಕಾಶ್, ನಟರಾಜ ಬೂದಾಳು ಸಂಪನ್ಮೂಲ ವ್ಯಕ್ತಿಗಳ ವಿಚಾರ ಮಂಡನೆಗೆ ಪ್ರತಿಕ್ರಿಯೆ ನೀಡಿದರು.
ಲೋಯೊಲಾ ಕಾಲೇಜು ಪ್ರಾಂಶುಪಾಲ ಪ್ರಾನ್ಸಿಸ್ ಡಿʼಅಲ್ಮೇಡಾ ಯೇ.ಸ. ಅವರು ಉದ್ಘಾಟಿಸಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಪ್ರೋ. ಬಾಲಕೃಷ್ಣ ಎಸ್. ಹೆಗ್ಡೆ ವಹಿಸಿದ್ದರು.
ಡಾ ಜಯಪ್ರಕಾಶ್ ಶೆಟ್ಟಿ ಹೆಚ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ ಕುಮಾರಸ್ವಾಮಿ ಬೆಜ್ಜಿಹಳ್ಳಿ ಸ್ವಾಗತಿಸಿದರು, ರಾಧಾಕೃಷ್ಣ ವಂದಿಸಿದರು. ರವಿಕುಮಾರ್ ಹಾಗೂ ಡಾ ವೆಂಕಟೇಶ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಏಕಕಾಲದಲ್ಲಿ ಝೂಮ್ ಹಾಗೂ ಫೇಸ್ಬುಕ್ ನೇರಪ್ರಸಾರದಲ್ಲಿ ಪ್ರಸರಣಗೊಂಡ ಈ ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.