ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಈ ಮೇಲಿನ ಪ್ರಖ್ಯಾತ ನುಡಿ ಕಟ್ಟನ್ನು ಉಪಯೋಗಿಸಲೂ ನನಗೆ ಮನಸ್ಸಿಲ್ಲ ಏಕೆಂದರೆ ಬೆಕ್ಕು ತಾನು ಮಾಡಿದ್ದು ಯಾರಿಗೂ ತಿಳಿಯಬಾರದು ಎಂದು ಮುಚ್ಚಿಡುತ್ತದೆ. ಮನುಷ್ಯ ಸೇರಿಸಿದ ನೀರು ಕಾಣಬಾರದೆಂದು ಕಣ್ಣು ಮುಚ್ಚಿ ಹಾಲು ಕುಡೀತದೆ. ಆದರೆ ಮನುಷ್ಯ? ಇರಲಿ.  

ಮೂಡುಬಿದಿರೆಯ ಮಂದಿ ಚುನಾಯಿಸಿದ ಸಂಸದರಿದ್ದಾರೆ , ಶಾಸಕರಿದ್ದಾರೆ, ಚುನಾಯಿತ ಪುರಸಭಾ ಸದಸ್ಯರುಗಳಿದ್ದಾರೆ, ಸರಕಾರದಿಂದ ನೇಮಕಾತಿಗೊಂಡ ಮೂಡಾ, ಪುರಸಭೆಗಳ ಅಧ್ಯಕ್ಷರು, ಸದಸ್ಯರುಗಳಿದ್ದಾರೆ, ವಿವಿಧ ಅಧಿಕಾರಿಗಳು, ತಾಲೂಕು ಮಟ್ಟದ ತಹಸಿಲ್ದಾರ್, ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿಗಳು ಹೀಗೆ ದೊಡ್ಡ ಗಡಣವೇ ನಮ್ಮ ಎದುರಿಗೆ ಇದೆ. ಆದರೆ ಫಲಿತಾಂಶ?

ಯಾರನ್ನೂ ಬೊಟ್ಟು ಮಾಡುವಂತಿಲ್ಲ. ಒಬ್ಬರು ಇನ್ನೊಬ್ಬರ ಕಡೆಗೆ, ಅವರು ಮತ್ತೊಬ್ಬರಿಗೆ ಹೀಗೆ ಮುಂದುವರೆಯುತ್ತದೆ. ಎಲ್ಲವನ್ನೂ ಸಂಭಾಳಿಸಬೇಕಾದ ತಹಶೀಲ್ದಾರ್, ಶಾಸಕರಿಗೆ ಪುರುಸೊತ್ತು ಇಲ್ಲ.

ಇಲ್ಲವಾದರೆ: ಒಳಚರಂಡಿ ವ್ಯವಸ್ಥೆ:- ಕಳೆದ ಎರಡು ವರ್ಷಗಳಿಂದ ಮುಖ್ಯ ರಸ್ತೆಯ ಬದಿಯಲ್ಲಿಯೇ ಎದ್ದು ಹೋದ ಚಪ್ಪಡಿ ಕಲ್ಲುಗಳನ್ನು ಸರಿಪಡಿಸುವ, ಒಳ ಚರಂಡಿ ಸಮರ್ಪಕಗೊಳಿಸುವ ಭರವಸೆ ಭರವಸೆಯಾಗಿಯೇ ಇದೆ.

ಮುಖ್ಯ ರಸ್ತೆಯ ಬದಿಯ ಪಾದಾಚಾರಿ ಮಾರ್ಗ: ಅತಿಕ್ರಮಿಸಿದ್ದನ್ನು ನಾಲ್ಕು ತಿಂಗಳಿಂದ ತಿಳಿಸಿದರೂ ಇನ್ನೂ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ಪೊಲೀಸ್ ಠಾಣೆ, ಅಬಕಾರಿ ನಿರೀಕ್ಷಕರ ನಡುವೆ, ರೋಟರಿ ಶಾಲೆಗೆ ತಿರುಗುವ ಮುಖ್ಯ ರಸ್ತೆಯ ಅತ್ಯಂತ ಅಗಲ ಕಿರಿದಾದ ರಸ್ತೆಯಲ್ಲಿ, ಹಿಂದಿನ ಮಾರುಕಟ್ಟೆಯ ಎದುರು ಅಲಂಕಾರ್ ವಸ್ರ್ತ ಅಂಗಡಿ ಬಳಿ, ಸತ್ಯನಾರಾಯಣ ದೇವಾಲಯದ ಎದುರು ಕೂಡಾ ಸದಾ ವಾಹನಗಳ ಮೇಲಾಟ ಈ ಎಲ್ಲಾ ಪ್ರದೇಶಗಳಲ್ಲಿ ಪಾದಾಚಾರಿ ಮಾರ್ಗ ಅತಿಕ್ರಮಿಸಿದ್ದನ್ನು.

ಕೊಳಚೆ ಕಶ್ಮಲಗಳು: ಪುರಸಭೆಯ ಶುಚಿತ್ವದ ಮಂದಿ ಎಷ್ಟೋ ಪ್ರಯತ್ನಿಸಿ ಶುಚಿತ್ವ ಕಾಪಾಡುತ್ತಿದ್ದಾರೆ. ಹೀಗಿದ್ದರೂ ಪ್ರಾಂತ್ಯ-ವಿಶಾಲ ನಗರ ನಡುವಿನ ರಸ್ತೆಯ ಬದಿಯಲ್ಲಿ, ಮಾಸ್ತಿ ಕಟ್ಟೆ ಪಂಚಾಯತ್ ಬಳಿ, ಜ್ಯೋತಿ ನಗರ ಶಾಲೆ -ಮೆಸ್ಕಾಂ ನಡುವೆ ಪ್ರದೇಶದಲ್ಲಿ, ಕೊಳಚೆ ಕಶ್ಮಲಗಳು ಹಲವಾರು ದಿನಗಳಿಂದ ಹಾಗೇ ಇದೆ.