ಉಡುಪಿ : ದುಶ್ಚಟಗಳು ಮನುಷ್ಯನಿಗೆ ತಾತ್ಕಾಲಿವಾಗಿ ಸುಖ ನೀಡಿದರೂ , ನಂತರದಲ್ಲಿ ಅವನ ಅಮೂಲ್ಯವಾದ ಸಮಯ, ಆರೋಗ್ಯ, ಗೌರವವನ್ನು ಹಾಳು ಮಾಡುವುದರ ಜೊತೆಗೆ ಆರ್ಥಿಕ ನಷ್ಠವನ್ನು ಉಂಟು ಮಾಡುತ್ತದೆ ಇದರಿಂದ ಯುವಜನರು ದೂರ ಇರುವುದು ಒಳಿತು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಕಿವಿ ಮಾತು ಹೇಳಿದರು. ಅವರು ಇಂದು ಮಣಿಪಾಲದ ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜು ಮಣಿಪಾಲ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಡಾ. ಮಹಾಂತೇಶ ಶಿವಯೋಗಿಗಳ ಜನ್ಮದಿನ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

       ಕ್ಷಣಿಕ ಸುಖಕ್ಕಾಗಿ  ಜನರು ವ್ಯಸನಕ್ಕೆ ದಾಸರಾಗುವುದರೊಂದಿಗೆ,  ದುಶ್ಚಟಗಳ ಚಕ್ರವ್ಯೂಹದಲ್ಲಿ ಸಿಲುಕಿ ಅದರಿಂದ  ಹೊರಬರುವುದು  ಕಷ್ಠಸಾಧ್ಯ. ಯುವಜನರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣ ಹೊಂದಿ, ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ  ಸದೃಡ ಭಾರತ ನಿರ್ಮಾಣಕ್ಕೆ  ಮುಂದಾಗಬೇಕೆಂದು  ಕರೆ ನೀಡಿದರು.

        ಡಾ.ಮಹಾಂತೇಶ ಶಿವಯೋಗಿಗಳು ಮೂಲತಃ ವಿಜಯಪುರ ಜಿಲ್ಲೆಯಲ್ಲಿ ಜನಿಸಿ, ನಂತರ ಯೋಗಿಗಳಾಗಿ ರಾಜ್ಯ, ದೇಶ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ  ಜೋಳಿಗೆ ಹಿಡಿದು ಜನರಲ್ಲಿನ ವ್ಯಸನಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಳ್ಳುವುದರೊಂದಿಗೆ ಅವರ ಮನಪರಿವರ್ತಿಸಿ, ಉತ್ತಮ ಜೀವನ ನಡೆಸಲು ತಿಳಿ ಹೇಳಿದಂತಹ ಮಹಾನ್ ವ್ಯಕ್ತಿ ಎಂದರು.

     ಸರಕಾರ ಆರೋಗ್ಯವಂತ ಸಮಾಜ ಹೊಂದಬೇಕು ಎಂಬ ಆಶೋತ್ತರಗಳೊಂದಿಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು  ಮಾಡುತ್ತಿದೆ.  ಡಾ.ಮಹಾಂತೇಶ ಶಿವಯೋಗಿ ಸ್ವಾಮೀಜಿಯವರು  20-21 ನೇ ಶತಮಾನದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ತಮ್ಮ ಜೋಳಿಗೆಯಲ್ಲಿ ದುಶ್ಚಟಗಳ ಭಿಕ್ಷೆಯನ್ನು ಬೇಡಿ ಪರಿವರ್ತನೆಗೆ ಮುಂದಾಗಿದ್ದರ ಹಿನ್ನೆಲೆಯಲ್ಲಿ ಅವರ ಜನ್ಮದಿನಾಚರಣೆಯನ್ನು  ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿದೆ ಎಂದರು.

        ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಮಾತನಾಡಿ, ಸಾಮಾನ್ಯವಾಗಿ ವಿದ್ಯಾರ್ಥಿ ಜೀವನದಲ್ಲಿ ಯುವ ಜನರು ತಮ್ಮ ಸ್ನೇಹಿತರ ಸಹವಾಸ ಹಾಗೂ ಪ್ರಚೋದನೆಯಿಂದಾಗಿ ಕೆಟ್ಟ ಚಟಗಳನ್ನು ಕಲಿಯುತ್ತಾರೆ . ಅಂತಹ ಹವ್ಯಾಸಗಳು ಆರೋಗ್ಯದ  ಮೇಲೆ ದುಷ್ಪರಿಣಾಮ ಉಂಟಾಗಿ ,ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸುವುದರ ಜೊತೆಗೆ ಅವರ  ಭವಿಷ್ಯವನ್ನು  ಕತ್ತಲೆಗೆ ತಳ್ಳುತ್ತದೆ,  ಇಂತಹ ವ್ಯಸನಗಳಿಗೆ ಯುವಜನತೆ ಬಲಿಯಾಗದೇ ದೂರವಿರಬೇಕು ಎಂದರು. 

    ಮನೋವೈದ್ಯರಾದ ಅವರು, ತಮ್ಮ ದೈನಂದಿನ ವೃತ್ತಿ ಜೀವನದಲ್ಲಿ ಯುವಜನರು ದುಶ್ಟಟಗಳಿಗೆ ದಾಸರಾಗಿ ಜೀವನವನ್ನು ಹಾಳುಗೆಡವಿಕೊಂಡ ನಿದರ್ಶನಗಳನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವ ರೀತಿಯಲ್ಲಿ ತಿಳಿಸಿ,  ಸ್ವಾಮಿ ವಿವೇಕಾನಂದರ ನುಡಿಯಂತೆ,  ಪ್ರಸ್ತುತ  ನಮ್ಮ ಜೀವನದ ಶಿಲ್ಪಿಗಳು ನಾವೇ  ಜೀವನದ ದಾರಿಯಲ್ಲಿ ಒಳಿತು ಮತ್ತು ಕೆಡುಕುಗಳನ್ನು ಅಲೋಚಿಸಿ ಮುಂದುವರಿಯುವುದು ಸೂಕ್ತ  ಎಂದರು.     

    ಕಾರ್ಯಕ್ರಮದಲ್ಲಿ  ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ  ಜಿಲ್ಲಾ  ವಾರ್ತಾಧಿಕಾರಿ ಮಂಜುನಾಥ್ ಬಿ. ಡಾ.ಮಹಾಂತೇಶ ಶಿವಯೋಗಿಗಳ ಹಿನ್ನೆಲೆ ಹಾಗೂ ಸಮಾಜದಲ್ಲಿ ಅವರು ಜಾರಿಗೆ ತಂದ ಸುಧಾರಣೆ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಅವರಿಗಿದ್ದ ದೂರದೃಷ್ಠಿಯ ಬಗ್ಗೆ ತಿಳಿಸಿದರು.

     ಕಾಲೇಜಿನ ಉಪಪ್ರಾಂಶುಪಾಲ ಡೇರಿಕ್ ಮಸ್ಕರೇನಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿ, ಭಾಷಣ ಸ್ಪರ್ದೇಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಪ್ರಾಂಶುಪಾಲ ನರೇಂದ್ರ ಪೈ, ಕಾಲೇಜಿನ ಶೈಕ್ಷಣಿಕ ಸಂಯೋಜಕ ರಂಗ ಪೈ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಪ್ರಿಯಾಂಕ ನಿರೂಪಿಸಿ, ಸತ್ಯವ್ರತಾ ವಂದಿಸಿದರು.