ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗ ಮತ್ತು ಐಕ್ಯುಎಸಿಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಫೆಸ್ಟ್ ಫಿಲೋ ವೆಂಚುರಾ 2024 ‘ಸಂಹರ್ಷ’ವನ್ನು ಆಯೋಜಿಸಲಾಯಿತು. ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ಅತಿ ವಂ| ಲಾರೆನ್ಸ್ ಮಸ್ಕರೇನಸ್ ರವರು  ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು  "ಅಂತರ್ ಕಾಲೇಜು ಸ್ಪರ್ಧೆಗಳು  ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತವೆ, ಅವರ ಕೌಶಲ್ಯವನ್ನು ಹೆಚ್ಚಿಸುತ್ತವುದಲ್ಲದೆ  ಮತ್ತು ಕಾರ್ಯಕ್ರಮವನ್ನು ಆಯೋಜಿಸುವ ವಿವಿಧ ಹಂತಗಳ ಬಗ್ಗೆ ಅರಿವು ಮೂಡಿಸುತ್ತದೆ" ಎಂದು ಹೇಳಿ ಆಯೋಜಕರನ್ನು ಅಭಿನಂದಿಸಿದರು.  ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ಸಂದರ್ಭೋಚಿತವಾಗಿ ಮಾತನಾಡಿ ಈ ರೀತಿಯ ಫೆಸ್ಟ್ಗಳನ್ನು ಆಯೋಜಿಸಲು ಮತ್ತು ಭಾಗವಹಿಸಲು ಉತ್ಸುಕತೆ ತೋರಿದ ವಿದ್ಯಾರ್ಥಿಗಳು ಮತ್ತು ಭಾಗವಹಿಸಿದವರನ್ನು ಅಭಿನಂದಿಸಿದರು. 

ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರಿನ ಎಸ್ಆರ್ಕೆ ಲ್ಯಾಡರ್ಸ್ ನ  ಮಾಲಕರಾದ  ಕೇಶವ ಅಮೈ ಮಾತನಾಡಿ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಒತ್ತು ನೀಡಿದರು. ಉದ್ಯಮಿಯಾಗಿ ತಮ್ಮ  ವೈಯಕ್ತಿಕ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹೇಳಿದ ಅವರು   ಯುವ ಮನಸ್ಸುಗಳನ್ನು  ನಾವೀನ್ಯತೆಯ ಬಗ್ಗೆ ಚಿಂತನೆ ಮಾಡುವಂತೆ ಪ್ರೇರೇಪಣೆ ನೀಡಿದರು. ಉದ್ಯಮ ಕ್ಷೇತ್ರದಲ್ಲಿ ಎದುರಾಗುವ  ಪ್ರತಿಕೂಲ ಪರಿಸ್ಥಿತಿಗಳನ್ನು   ಯಾವ ರೀತಿ ಎದುರಿಸಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ವಿಜಯ ಕುಮಾರ್ ಎಂ ರವರು ದಿನದುದ್ದಕ್ಕೂ ನಡೆಯಲಿರುವ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿರುವ ಸ್ಪರ್ಧಾಳುಗಳಿಗೆ ಹಾಗೂ ಸಂಘಟಕರಿಗೆ ಶುಭಹಾರೈಸಿದರು.  ಉದ್ಘಾಟನ ಸಮಾರಂಭದಲ್ಲಿ ಜಸ್ಮಿತಾ ಮತ್ತು ಸಂಗಡಿಗರು ಪ್ರಾರ್ಧಿಸಿದರು. ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕರಾದ ಹರ್ಷಿತ್ ಆರ್ ಸ್ವಾಗತಿಸಿದರು. ʼಸಂಹರ್ಷʼದ ವಿದ್ಯಾರ್ಥಿ ಸಂಯೋಜಕರಾದ ಧನುಶ್ ವಂದಿಸಿದರು.  ಶ್ರೀರಾಗಾ ಕಾರ್ಯಕ್ರಮ ನಿರೂಪಸಿದರು.   

ಸಾಯಂಕಾಲ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರು  ಸ್ಪರ್ಧೆ ಪ್ರಾಮುಖ್ಯತೆಯನ್ನು  ಒತ್ತಿ ಹೇಳಿದರು. "ಓಟದಲ್ಲಿ ಒಬ್ಬರು ಗೆಲ್ಲುತ್ತಾರೆ, ಹಲವು ಜನ ಸ್ಪರ್ಧಾಳುಗಳು  ಬಹುಮಾನ ಪಡೆಯುವಲ್ಲಿ ವಿಫಲರಾಗುತ್ತಾರೆ.   ಗೆಲ್ಲುವುದೆಂದರೆ ಮೊದಲ ಬಹುಮಾನ ಪಡೆಯುವುದಲ್ಲ ಮತ್ತು ಇತರರನ್ನು ಸೋಲಿಸುವುದಲ್ಲ. ಇದು ನಿಮ್ಮನ್ನು ನೀವು ಜಯಿಸುವ ಬಗ್ಗೆ. ಓಟದಲ್ಲಿ ಸೋತವರಿಗೆ ಗೆಲ್ಲಲು ಇನ್ನೊಂದು ಅವಕಾಶವಿದೆ; ನಿರಂತರ ಪರಿಶ್ರಮವು ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ" ಮತ್ತು  ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಮನೋಭಾವದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು ಮತ್ತು ಭಾಗವಹಿಸುವವರ ನಿರಂತರ ಪರಿಶ್ರಮವನ್ನು ಶ್ಲಾಘಿಸಿದರು. ಮುಖ್ಯ ಅತಿಥಿ, ಸಿಎ ಅರವಿಂದ ಕೃಷ್ಣ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಭವಿಷ್ಯದ ವೃತ್ತಿಪರರನ್ನು ರೂಪಿಸುವಲ್ಲಿ ಸಂವಹನ ಮತ್ತು ನಾಯಕತ್ವದ ಕೌಶಲ್ಯಗಳ ಮಹತ್ವದ ಪಾತ್ರವನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು. ಸಂಹರ್ಷದಲ್ಲಿ ಮೂವತ್ತಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು   ಮಡಂತ್ಯಾರ್ ನ  ಸೇಕ್ರೆಡ್ ಹಾರ್ಟ್ ಕಾಲೇಜು ವಿಜೇತರ ಪ್ರಶಸ್ತಿಯನ್ನು ಮತ್ತು ಪುತ್ತೂರಿನ ವಿವೇಕಾನಂದ ಕಾಲೇಜು ರನ್ನರ್ಸ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು. ಸಮಾರೋಪ ಕಾರ್ಯಕ್ರಮದಲ್ಲಿ ʼಸಂಹರ್ಷʼದ ವಿದ್ಯಾರ್ಥಿ ಸಹಸಂಯೋಜಕರಾದ ಪೂಜಾ ಸ್ವಾಗತಿಸಿದರು. ಸಿಬ್ಬಂದಿ ಸಂಚಾಲಕಿ ಪೃಥ್ವಿ ಕೆ ಪ್ರಶಸ್ತಿ ವಿಜೇತರನ್ನು ಘೋಷಿಸಿದರು. ದೇವಿಕಾ ಕಾರ್ಯಕ್ರಮ ನಿರೂಪಿಸಿದರು.