ಉಡುಪಿ/ಮುಂಬಯ:  ಹಲವಾರು ರಾಜಕಾರಣಿಗಳ ಪರವಾಗಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಾನು ವಾದ ಮಾಡುತ್ತಿದ್ದು ಆ ಸಮಯದಲ್ಲಿ ನನಗೆ ಜಾರ್ಜ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡುವ ಅವಕಾಶ  ಸಿಕ್ಕಿದೆ. ಇಂದು ನನಗೆ ಜಾರ್ಜ್ ಫರ್ನಾಂಡಿಸ್  ಹೆಸರಲ್ಲಿ ನೀಡಿದ ಪ್ರಶಸ್ತಿ ಹೆಮ್ಮೆ ತಂದಿದೆ. ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು   ಸ್ಥಾಪಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಜಿಲ್ಲೆಯಲ್ಲಿ ಬಹಳ ಅದ್ಭುತ ಕೆಲಸಗಳನ್ನು ಮಾಡುತ್ತಿದೆ. ಸಮಿತಿಗೆ ನನ್ನ ಅಭಿನಂದನೆಗಳು ಎಂದು ಕರ್ನಾಟಕ ಸರಕಾರದ ಮಾಜಿ ಲೋಕಾಯುಕ್ತರೂ, ಭಾರತದ ಸರ್ವೋಚ್ಚ ನ್ಯಾಯಾಲಯದ  ಮಾಜಿ ನ್ಯಾಯಾಧೀಶರೂ ಆದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ನುಡಿದರು.

ಜೂ. 8 ರಂದು ಬೆಳಿಗ್ಗೆ ಉಡುಪಿಯ ಹೋಟೆಲ್ ಓಷಿಯನ್ಪರ್ಲ್, ಟೈಮ್ಸ್ ಸ್ಕ್ವೇರ್ ಕಟ್ಟಡ, ಕಲ್ಸಂಕ, ಇಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಇದರ ವತಿಯಿಂದ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಸಮಿತಿಯು ಎರಡು ಜಿಲ್ಲೆಗಳ ಅಭಿವೃದ್ಧಿಗಳ ಬಗ್ಗೆ ಮಾಡುತ್ತಿರುವ ಕೆಲಸದ ಬಗ್ಗೆ ನನಗಿಂತಲೂ ನಿಮ್ಮೆಲ್ಲರಿಗೆ ಹೆಚ್ಚಿನ ಮಾಹಿತಿ ಇದೆ.  ಕರ್ನಾಟಕದ ಲೋಕಾಯುಕ್ತ ಬಂದ ನಂತರ ನನಗೆ ಅನಿಸಿತು, ಅಷ್ಟರ ತನಕ ನಾನು ಕೂಪ ಮಂಡೂಕನಂದಿದ್ದೆ. ನಾನು ಸುಖವಾಗಿದ್ದು ಬಹಳಷ್ಟು ಜನರು ಸುಖವಾಗಿದ್ದಾರೆ ಎಂದು ಎಣಿಸಿಕೊಂಡಿದೆ. ಲೋಕಾಯುಕ್ತ ಬಂದ ನಂತರ ಬಹಳಷ್ಟು ಅನ್ಯಾಯವನ್ನು ಕಂಡೆ. ಶಾಸಕಾಂಗ, ಕಾರ್ಯಾಂಗ ಯಾ ನ್ಯಾಯಾಂಗ ಯಾವುದೇ ಇರಬಹುದು. ಇದು ವ್ಯಕ್ತಿಗಳ ತಪ್ಪಲ್ಲ, ಇದು ಸಮಾಜದ ತಪ್ಪು. ಇವತ್ತು ಅಂತಹ ಸಮಾಜ ಬದಲಾಗಿದೆ.  ಇವತ್ತು ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಂತ ವ್ಯಕ್ತಿಗಳನ್ನು ಹೂ ಹಾರ ಹಾಕಿ ಬರ ಮಾಡಿ ಕೊಳ್ಳುತ್ತಿದ್ದಾರೆ. ಇವತ್ತು ಸಮಾಜದಲ್ಲಿ ಒಳ್ಳೆಯವರಿಗೆ ಜಾಗ ಸಿಗುತ್ತಿಲ್ಲ ಇದಕ್ಕೆ ದುರಾಸೆ ಕಾರಣವಾಗಿದೆ ದುರಾಶೆಗೆ ತೃಪ್ತಿಯೇ ಮದ್ದು. ತೃಪ್ತಿ ಇದ್ದರೆ ದುರಾಸೆ ಬರಲಿಕ್ಕಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸಂಪಾದಿಸೋಣ. ಆದರೆ ಇನ್ನೊಬ್ಬನ ಜೇಬಿಗೆ ಕೈ ಹಾಕಿ ಅಲ್ಲ. ಕಾನೂನು ಚೌಕ್ಕಟ್ಟಿನಲ್ಲಿ ಮಾಡಿದ ಸಂಪಾದನೆಯಿಂದ ತೃಪ್ತಿಗೊಳ್ಳಲು ಸಾಧ್ಯ.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ದಿಕ್ಸೂಚಿ ಭಾಷಣ ಮಾಡಿದರು.

ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಸಮಿತಿಯ ಸಲಹೆಗಾರರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪದ್ಮವಿಭೂಷಣ ದಿ. ಜಾರ್ಜ್ ಫರ್ನಾಂಡಿಸ್  ಮಾತನಾಡುತ್ತಾ ಜಾರ್ಜ್ ಫರ್ನಾಂಡಿಸ್ ಓರ್ವ ಪ್ರಾಮಾಣಿಕ ಭಾರತೀಯನಾಗಿ  ಜಾತಿ ಮತ ಬೇದವಿಲ್ಲದ ಸಮಾಜದ ಬಗ್ಗೆ ಅಪಾರವಾದ ಕಾಳಜಿಯಿಟ್ಟುಕೊಂಡವರು. ಇಂತಹ ಮಹಾನ್ ವ್ಯಕ್ತಿಯ ಸ್ಮರಣಾರ್ಥ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಇಂದು ಸರಿಯಾದ ವ್ಯಕ್ತಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದನೀಯ ಎಂದರು.

ಗೌರವ ಅತಿಥಿ ಬಹುಬಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಪೂಜಾರಿ, ಮಾತನಾಡುತ್ತಾ ಮಹಾ ಸಾಧಕ ನಮ್ಮ ಕರಾವಳಿಯವರೇ ಆದ ದಿ. ಜಾರ್ಜ್ ಫರ್ನಾಂಡಿಸ್ ರ ಸ್ಮಾರಕ ಪ್ರಶಸ್ತ್ಗಿಯನ್ನು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರಿಗೆ ನೀಡುತ್ತಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬಾ ಸಂತೋಷವಾಗುತ್ತಿದೆ. ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಬಹಳ ದೂರದಲ್ಲಿ ಇದ್ದರೂ ತವರೂರಿನ ಅಭಿವೃದ್ದಿ ಬಗ್ಗೆ ಸಮಿತಿಯ ಮೂಲಕ ಕಾರ್ಯನಿರ್ವಹಿಸುತ್ತಿದ್ದು ಜಾರ್ಜ್ ಫರ್ನಾಂಡಿಸ್ ರವರ ಸಾಧನೆ ಮುಂದಿನ ಪೀಳಿಗೆಗೆ ತಿಳಿಯುವಂತಾಗಲು ಅವರ ಹೆಸರು ಸದಾ ನೆನಪಿಡುವಂತಹ ಕಾರ್ಯ ನಮ್ಮೆಲ್ಲರಿಂದಾಗಲಿ ಎಂದರು.

ಸಮಿತಿಯ ರಾಜ್ಯ ಸಂಯೋಜಕರಾದ ಕೆ. ಪಿ. ಜಗದೀಶ್ ಅಧಿಕಾರಿ ಯವರು ಮಾತನಾಡಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರೊಂದಿಗೆ ವೇದಿಕೆ ಹಂಚುವುದು ಒಂದು ದೊಡ್ಡ ಸೌಭಾಗ್ಯ.  ಇವರ ತನ್ನ ಕಾರ್ಯ ಸಾಧನೆಯ ಮೂಲಕ ಮುಂದಿನ ಯುವ ಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಿದಂತಾಗುವುದು ಎಂದು ಶುಭ ಹಾರೈಸಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡುತ್ತಾ ಹಿರಿಯರ ಹೆಜ್ಜೆಯ ಗುರುತುಗಳನ್ನು ಅನುಸರಿಸಬೇಕಂತ ಹೇಳುತ್ತಾರೆ, ಸಮಾಜಕ್ಕಾಗಿ ಬದುಕಿದ ಜಾರ್ಜ್ ಫರ್ನಾಂಡಿಸ್ ರವರಂತವರ ಹೆಜ್ಜೆಯ ಗುರುತನ್ನು ಅನುಸರಿಸುವಂತ ಕಾರ್ಯ ನಡೆದಿದ್ದರೆ ಅದು ಮುಂಬಯಿಯ ನಮ್ಮ ಬಂದುಗಳಿಂದ,  ಯಾಕೆಂದರೆ ಮುಂಬಯಿಗರಾದ ನಿಮಗೆ ಈ ಮಣ್ಣಿನ ಬಗ್ಗೆ ಒಂದು ಅವಿನಾಭಾವ ಸಂಬಂಧವಿದೆ.  ಇಲ್ಲಿನ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಇಂತಹ  ಎಲ್ಲಾ ಕಾರ್ಯಕ್ರಮಗಳಿಗೆ ಮುಂಬಯಿಗರ ಕೊಡುಗೆ ಬಹಳಷ್ಟಿದೆ. ಕಳೆದ 25 ವರ್ಷಗಳಿಂದ ಕ್ರೀಯಾಶೀಲವಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಇದೀಗ ಜಾರ್ಜ್ ಫರ್ನಾಂಡಿಸ್ ರವರ ಹೆಸರಲ್ಲಿ  ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರಿಗೆ  ಪ್ರಶಸ್ತಿಯನ್ನು ಪ್ರದಾನಿಸಿದ್ದು ಸಮಿತಿಯು ಸಮಾಜದ ಮನಸ್ಸನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದ್ದು ನಾವೆಲ್ಲರೂ ಅವರೊಂದಿಗೆ ಕೈಜೋಡಿಸುವ ಎಂದರು.

ವೇದಿಕೆಯಲ್ಲಿ ಗೌರವ ಅತಿಥಿ, ಕರ್ನಾಟಕದ ಎಂ.ಎಲ್.ಸಿ. ಐವನ್ ಡಿ’ಸೋಜಾ,  ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್  ಸಮಿತಿಯ ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ ಉಪಸ್ಥಿತರಿದ್ದರು. ಸಮಿತಿಯ ವಕ್ತಾರ ದಯಾಸಾಗರ ಚೌಟ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಮಿತಿಯ ಸಲಹೆಗಾರರಾದ ಬಿ. ರಮಾನಂದ ರಾವ್ ಮತ್ತು ಲಕ್ಷ್ಮಣ್ ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಡಾ. ಸುರೇಂದ್ರಕುಮಾರ್ ಹೆಗ್ಡೆ, ನ್ಯಾ. ಆರ್. ಎಂ. ಭಂಡಾರಿ, ಶ್ರೀನಿವಾಸ್ ಸಾಪಲ್ಯ, ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್, ಗೌರವ ಕಾರ್ಯದರ್ಶಿಗಳಾದ  ದೇವದಾಸ್ ಕುಲಾಲ್,  ಸಿಎಸ್ ಗಣೇಶ್ ಶೆಟ್ಟಿ, ಗೌರವ ಜೊತೆ ಕಾರ್ಯದರ್ಶಿ ರಾಕೇಶ್ ಭಂಡಾರಿ ಮತ್ತು ಮಹೇಶ್ ಕಾರ್ಕಳ, ಮಾಜಿ ಅಧ್ಯಕ್ಷ   ಧರ್ಮಪಾಲ ಯು. ದೇವಾಡಿಗ,   ಸದಸ್ಯರುಗಳಾದ ರವಿ ದೇವಾಡಿಗ, ವಾಸು ದೇವಾಡಿಗ, ತೋನ್ಸೆ ಅಶೋಕ್ ಎಸ್. ಶೆಟ್ಟಿ, ತುಳಸಿದಾಸ್ ಎಲ್. ಅಮೀನ್, ನ್ಯಾ. ದಯಾನಂದ ಶೆಟ್ಟಿ, ಕರುಣಾಕರ ಹೆಜ್ಮಾಡಿ, ಚಿತ್ರಾಪು ಕೆ.ಎಂ. ಕೋಟ್ಯಾನ್, ರಾಮಣ್ಣ ದೇವಾಡಿಗ, ಜಿಲ್ಲಾ ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ದಿವಾಕರ್ ಪೊಸ್ರಾಲ್, ರವಿ ಮೆಂಡನ್, ಶೇಖರ ಗುಜ್ಜರಬೆಟ್ಟು, ಪ್ರತಾಪ್ ಕೋಟ್ಯಾನ್, ರವಿರಾಜ್ ಕಲ್ಯಾಣ್ಪುರ್, ಅರ್. ಎಚ್. ಶೆಟ್ಟಿಗಾರ್, ನಿರಂಜನ್ ಕರ್ಕೇರ, ನಾಗೇಶ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ನ್ಯಾ. ಗುಣಾಕರ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ, ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ ಸಾಲ್ಯಾನ್,  ನಿರಂಜನ್ ಎಲ್ ಪೂಜಾರಿ, ಪೆಲಿಕ್ಸ್ ಡಿ’ಸೋಜಾ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಗೌರವ ಕಾರ್ಯದರ್ಶಿ ಜಿ. ಟಿ. ಆಚಾರ್ಯ ವಂದನಾರ್ಪಣೆ ಮಾಡಿದರು.


ಪರಿಸರವನ್ನು ರಕ್ಷಿಸುದರೊಂದಿಗೆ ಅಭಿವೃದ್ಧಿಗೆ ಬೆಂಬಲಿಸುತ್ತಿದ್ದೇವೆ-ತೋನ್ಸೆ ಜಯಕೃಷ್ಣ ಎ. ಶೆಟ್ಟಿ 

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡುತ್ತಾ ಇಂದು ಪ್ರಶಸ್ತಿ ಸ್ವೀಕರಿಸುತ್ತಿರುವ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ರವರಂತೆ ನೇರ ನೇರನುಡಿಯ  ವ್ಯಕ್ತಿತ್ವವನ್ನು ಹೊಂದಿದವರು ಎನ್. ಸಂತೋಷ್ ಹೆಗ್ಡೆಯವರಿಗೆ ಈ ಪ್ರಶಸ್ತಿ ನೀಡಿದ್ದರಿಂದ ದಿ. ಜಾರ್ಜ್ ಫರ್ನಾಂಡಿಸ್  ರವರ ಆತ್ಮಕ್ಕೆ ತೃಪ್ತಿ ಸಿಕ್ಕಿದಂತಾಗುವುದು. ನಮ್ಮ ಸಮಿತಿಯು ಪರಿಸರವನ್ನು ರಕ್ಷಿಸುದರೊಂದಿಗೆ ಅಭಿವೃದ್ಧಿಗೆ ಬೆಂಬಲಿಸುತ್ತಿದೆ.  ಜಾರ್ಜ್ ಫೆರ್ನಾಂಡಿಸ್ ಅವರು ಸಚಿವರಾಗಿದ್ದಾಗ ಅವರ ಸಹಕಾರದಿಂದ ನಮ್ಮ ಎನ್‌ಜಿಒ ಹಲವಾರು ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಬಂದರುಗಳು ಇರುವ ನಗರಗಳು ಅಭಿವೃದ್ಧಿಶೀಲ ನಗರವಾಗುತ್ತವೆ. ಆದರೆ ಮಂಗಳೂರು ಅಭಿವೃದ್ಧಿಯಾಗಿಲ್ಲ. ಹಾಗಾಗಿ ಮುಂದಿನ ವರ್ಷದ ಅಂತರಾಷ್ಟ್ರೀಯ ಹೂಡಿಕೆದಾರರ ಮಂಗಳೂರಿನಲ್ಲಿ ಆಯೋಜಿಸುವಂತಾಗಬೇಕು. ವಿದ್ಯುತ್ ಪವರ್ ಕಟ್ ನಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಸಮಸ್ಯೆ ಎದುರಿಸುತ್ತರುವುದರ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ತಿಳಿಸಿದ್ದೆವು. ಪ್ರಸ್ತುತ ನಮ್ಮ ಜಿಲ್ಲೆಗೆ ಪವರ್ ಕಟ್ ಸಮಸ್ಯೆ ಇಲ್ಲ. ಆದರೆ ಕೆಲವು ಟ್ರಾನ್ಸ್ ಫಾರ್ಮರ್ ಗಳು ದುರಸ್ಸಿಗೆ ಬಂದಿದ್ದು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ . ನೇತ್ರಾವತಿ ನದಿ ನೀರಿನ ಸ್ವಚ್ಛತೆಯ ಬಗ್ಗೆಯೂ ನಾವು ಧ್ವನಿ ಎತ್ತಿದ್ದು, ಅದರ ಶುದ್ದೀಕರಣ ಆಗಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಎರಡು ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಯನ್ನು ತರುವ ಕೆಲಸವನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮಾಡಲಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೋದ್ಯಮಗಳು ಸ್ಥಾಪನೆಯಾಗಲು,  ಎಲ್ಲರೂ ಪ್ತೋತ್ಸಾಹಿಸಿದಲ್ಲಿ  ಅದಕ್ಕೆ ಸಮಿತಿಯ ಬೆಂಬಲವು ಸದಾ ಇದೆ ಎಂದರು.

ಸಮಿತಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದು ಪ್ರಥಮವಾಗಿ ಬಹಳ ಮಹತ್ವದ ಕಾರ್ಯಕ್ರಮವು ಬೆಳ್ಳಿ ಹಬ್ಬವನ್ನು ಆಚರಿಸುವ ನಮ್ಮ ಸಮಿತಿಯಿಂದ ನಡೆಯುತ್ತಿರುವುದು ನನ್ನ ಸೌಭಾಗ್ಯ. ರಾಜಕೀಯದಲ್ಲಿ ಸಮಾಜ ಸೇವೆಯಲ್ಲಿ ಅತ್ಯಂತ ಉನ್ನತ ಮಟ್ಟಕ್ಕೇರಿದ ಜಾರ್ಜ್ ಫರ್ನಾಂಡಿಸ್ ಅವರ ಹೆಸರಲ್ಲಿ ಪ್ರಾಮಾಣಿಕತೆ, ಸಮಾನತೆ ಮತ್ತು ಸೇವಾ ಸಮರ್ಪಣೆಗೆ ಹೆಸರಾದಂತಹ ಶಿಸ್ತಿನ ಸಿಪಾಯಿ,  ಖ್ಯಾತ ನ್ಯಾಯಾಧೀಶ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಪ್ರಶಸ್ತ್ಗಿಯನ್ನು ಸ್ವೀಕರಿಸಿದ್ದು ನಮಗೂ ಗೌರವದ ಸಂಗತಿಯಾಗಿದೆ. ಎಲ್ಲಾ ಸಮುದಾಯವನ್ನು ಒಂದುಗೂಡಿಸಿ ಪ್ರಾಮಾಣಿಕವಾಗಿ ಜಿಲ್ಲೆಗಳ ಅಭಿವೃದ್ಧಿಗೆ ದುಡಿಯುತ್ತಿರುವ ನಮ್ಮ ಸಂಸ್ಥೆಯನ್ನು ಸ್ಥಾಪಿಸಿದ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವ ನೇತೃತ್ವದಲ್ಲಿ ಜಾರ್ಜ್ ಫರ್ನಾಂಡಿಸ್ ನಿಧನ ನಂತರ ಅವರ ಸ್ಮಾರಕ ರಾಷ್ಟೀಯ ಪ್ರಶಸ್ತ್ಗಿಯನ್ನು ನಾವು ನೀಡುತ್ತಾ ಬಂದಿದ್ದೇವೆ. ಜಿಲ್ಲೆಗಳ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಾ ಬಂದಿರುವ 25ನೇ ವರ್ಷದಲ್ಲಿರುವ ನಮ್ಮ ಸಮಿತಿಗೆ ಹಿಂದಿನಂತೆ ಮುಂದೆಯೂ ನೀವೆಲ್ಲರೂ ಸಹಕರಿಸಿ ಸಮಿತಿಯ ಬೆಳ್ಳಿ ಹಬ್ಬ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಹಾಗೂ ಮುಂದಿನ ನಮ್ಮ ಎಲ್ಲಾ ಯೊಜನೆಗಳಿಗೆ ನಮ್ಮೊಂದಿಗೆ ಜಿಲ್ಲಾ ಸಮಿತಿಯ ಎಲ್ಲರೂ ಹಿಂದಿನಂತೆ ಪ್ರೋತ್ಸಾಹಿಸಬೇಕಾಗಿ ವಿನಂತಿ.


ನಿತ್ಯಾನಂದ ಡಿ. ಕೋಟ್ಯಾನ್, ಅಧ್ಯಕ್ಷರು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ

ಸಂತೋಷ್ ಹೆಗ್ಡೆ ಅವರನ್ನು ಕಂಡಾಗ ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆಯಿಂದ ಸಮಾಜದಲ್ಲಿ ತನ್ನ ಸುತ್ತಲೂ ಬೆಳಕನ್ನು ಚೆಲ್ಲುವ ಶಕ್ತಿ ಅವರಲ್ಲಿದೆ. ಇಡೀ ಸಮಾಜದಲ್ಲಿ ಸತ್ಯವನ್ನು ಹೇಳಿ ಸಮಾಜಕ್ಕೆ ಶಕ್ತಿಯಾಗಿರುವಂತ ಒಂದು ವಿಶೇಷ ವ್ಯಕ್ತಿತ್ವ ಸಂತೋಷ ಹೆಗ್ಡೆ  ಅವರಿಗಿದೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಜಾರ್ಜ್ ಫರ್ನಾಂಡಿಸ್ ಅವರ ಹೆಸರಲ್ಲಿ ಸಂತೋಷ ಹೆಗ್ಡೆ  ಯವರಿಗೆ ಪ್ರಶಸ್ತಿ ಪ್ರದಾನಿಸುವ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ನಡೆಸಿದೆ.