ಮಂಗಳೂರು: ನಾಯಕತ್ವ, ಸಂವಹನ, ಅನುಭವ ಈ ಮೂರು ಆದರ್ಶಗಳನ್ನು ಯೂತ್ ರೆಡ್ ಕ್ರಾಸ್ ವಿದ್ಯಾರ್ಥಿ ಹೊಂದಿರಬೇಕು. ನಾಯಕನಾದವನ ಯೋಚನಾ ಶಕ್ತಿ ತೀರ್ಪುಗಾರನಂತಿರಬೇಕು ಮತ್ತು ಆತ ತೆಗೆದುಕೊಳ್ಳುವ ವಿಷಯ ನಿಖರವಾಗಿರಬೇಕು ಎಂದು ರಾಮಕೃಷ್ಣ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ನಟೇಶ್ ಆಳ್ವ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ನಡೆದ ಪುನಃಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ, ಉತ್ತಮ ನಾಯಕನಾಗಬೇಕಾದರೆ ಆತನ ಮಾರ್ಗವನ್ನು ಆತನೇ ನಿರ್ಧರಿಸಬೇಕೇ ಹೊರತು ಬೇರೊಬ್ಬರಿಂದ ನಿರ್ಧರಿಸಲು ಸಾಧ್ಯವಿಲ್ಲ. ಹಾಗೂ ನಾಯಕನಾದವನು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹಲವು ಭಾಷೆಯನ್ನು ತಿಳಿದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪೆ ಪ್ರೊ. ಗಣಪತಿಗೌಡ, ಯುವರೆಡ್ ಕ್ರಾಸ್ ಮಾನವೀಯ ಗುಣಗಳನ್ನು ಯುವಜನತೆಯಲ್ಲಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಮನುಷ್ಯನಲ್ಲಿ ಮಾನವೀಯ ಗುಣಇಲ್ಲದಿದ್ದರೆ ಮನುಷ್ಯನಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಯುವಜನಾಂಗದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಯುವರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್, ಅಂಗಾಂಗ ದಾನದ ಕುರಿತು ಮಾಹಿತಿ ನೀಡಿದ್ದಲ್ಲದೇ, ಮನುಷ್ಯ ಸತ್ತ ನಂತರವೂ ಸಮಾಜ ಸೇವೆ ಮುಂದುವರಿಸಲು ಒರುವ ಉತ್ತಮ ಅವಕಾಶ. ಹಾಗಾಗಿ ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ಅಂಗಾಂಗ ದಾನ ಕುರಿತಾದ ಜಾಗೃತಿ ಪುಸ್ತಕವನ್ನು ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಯುವರೆಡ್ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಭಾರತಿ ಪಿಲಾರ್ ಸ್ವಾಗತಿಸಿ ನಿರೂಪಿಸಿದರು. ವಿದ್ಯಾರ್ಥಿ ಮಣಿಕಂಠ ವಂದಿಸಿದರು.