ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗವು ವಿವಿಧ ವಿಚಾರಗಳ ಬಗ್ಗೆ ಅಧ್ಯಾಪಕರ ಮತ್ತು ವಿದ್ಯಾರ್ಥಿ ಸಮುದಾಯದ ಸಮೀಕ್ಷೆ ನಡೆಸಿ ಅದರ ಫಲಿತಾಂಶವನ್ನು ಅಂಕಿ ಅಂಶ ಸಹಿತ ಸುಧಾರಣಾ ವರದಿ ರೂಪದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರಿಗೆ ಇತ್ತೀಚೆಗೆ ಹಸ್ತಾಂತರಿಸಿದೆ. ಕುಲಸಚಿವ ರಾಜು ಮೊಗವೀರ, ಕೆಎಎಸ್ ಅವರಿಗೆ ಮುಂದಿನ  ಕ್ರಮಕ್ಕಾಗಿ ಸಲ್ಲಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯವು ಕರಾವಳಿಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಸಹಾಯಕವಾಗಿದೆ. ಆದರೆ ಕೊರೋನಾ ಮಹಾಮಾರಿಯ ನಂತರ ಶೈಕ್ಷಣಿಕ ವಲಯವೂ ಕೆಲವೊಂದು ಸಮಸ್ಯೆಗಳಲ್ಲಿ ಸಿಲುಕಿದ್ದು ಅವುಗಳಲ್ಲಿ  ಪ್ರಮುಖವಾದದ್ದು ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಆದ ವ್ಯತ್ಯಾಸ. ಎಪ್ರಿಲ್‌ – ಮೇ ತಿಂಗಳುಗಳಲ್ಲಿ ತರಗತಿಗಳು ಮುಗಿದು ವಾತಾವರಣಕ್ಕೆ ಅನುಕೂಲವಾಗಿದ್ದ ವೇಳಾಪಟ್ಟಿಯು ಜೂನ್‌ – ಜುಲಾಯಿವರೆಗೆ ವಿಸ್ತರಿತವಾಗಿ ಬಿಸಿಲಿನ ಘಾತಕ್ಕೆ ಶೈಕ್ಷಣಿಕ ವಲಯವು ಒಳಗಾಗಿದೆ. ಜೊತೆಗೆ ನೀರಿನ ಸಮಸ್ಯೆ, ವಿದ್ಯುಚ್ಛಕ್ತಿಯ ಹೆಚ್ಚಿನ ಬಳಕೆ, ಮುಂತಾದವುಗಳು  ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿ ಸಮೂಹದ ಮೇಲೆ ದುಷ್ಪರಿಣಾಮ ಬೀರಿದೆ.

ವರದಿ ಸಲ್ಲಿಕೆಯ ಸಂದರ್ಭದಲ್ಲಿ ವಿಭಾಗದ ಅಧ್ಯಕ್ಷೆ ಡಾ ಸುಧಾ ಎನ್ ವೈದ್ಯ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಡಾ. ಮಾಧವ ಎಂ ಕೆ, ಮತ್ತು ವಿಭಾಗದ ಕಾರ್ಯದರ್ಶಿ ವೆಂಕಟೇಶ್ ನಾಯಕ್ , ಡಾ. ಸುಭಾಷಿಣಿ ಶ್ರೀವತ್ಸ ಮತ್ತು ರಾಜೇಶ್  ಇವರು ಉಪಸ್ಥಿತರಿದ್ದರು