ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್‌ ಸಭಾ ಹಾಗೂ ಪರಿಸರ ಆಯೋಗದ ಜಂಟಿ ಆಶ್ರಯದಲ್ಲಿ 02 ಜೂನ್  2024 ರಂದು ನಗರದ ಶಾಂತಿಕಿರಣ್‌ ಸಭಾಂಗಣದಲ್ಲಿ ಮಳೆಕೊಯ್ಲು ಹಾಗೂ ನೀರಿಂಗಿಸುವಿಕೆಯ ಬಗ್ಗೆ ಜಲಬಂಧನ್‌-2024 ಕಾರ್ಯಾಗಾರ ನಡೆಯಿತು.

ಮುಖ್ಯ ಅತಿಥಿ ಫಾ. ಮುಲ್ಲರ್‌ ವೈದ್ಯಕೀಯ ಸಮೂಹ ಸಂಸ್ಥೆಯ ನಿಯೋಜಿತ ನಿರ್ದೇಶಕ ವಂ. ಫಾವೊಸ್ತಿನ್‌ ಲೋಬೊ ಮಾತನಾಡಿ ʻʻಬಿಸಿಯೇರುವಿಕೆ ಬಗ್ಗೆ ನಾವೆಲ್ಲಾ ಚಿಂತಿತರಾಗಿದ್ದೇವೆ. ಆದರೆ ಬಿಸಿಯೇರುವಿಕೆ ಸಮಸ್ಯೆಯ ಮೂಲ ಅರಿಯಲು ಸೋತದ್ದೇ ಇಂದಿನ ಪರಿಸ್ಥಿತಿಗೆ ಕಾರಣ. ನೀರಿಂಗಿಸುವಿಕೆಯ ಕೆಲಸ ಮಾಡುವವರಿಗೆ ಪಂಚ ʻಜʼ ಗಳ ಬಗ್ಗೆ ಅರಿವಿರಬೇಕು. ಜಲ, ಜಮೀನು, ಜಂಗಲ್‌, ಜಾನುವಾರು ಹಾಗೂ ಜನ ಕೊನೆಗೆ ಬರುತ್ತಾರೆ. ಮೊದಲ ನಾಲ್ಕು ಸುಸೂತ್ರವಾಗಿದ್ದರೆ ಜನ ಕುಶಲವಾಗಿರುತ್ತಾರೆʼʼ. ಎಂದು ಹೇಳಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಶ್ರೀ ಪಡ್ರೆ ಅವರು, ಮಂಗಳೂರು ಧರ್ಮಪ್ರಾಂತ್ಯದ ಪರಿಸರ ಆಯೋಗವು ನಿರ್ಮಿಸಿದ ಮಳೆ ಕೊಯ್ಲಿನ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ಪ್ರದರ್ಶಿಸುವ ಮುಖಾಂತರ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ನಂತರ ಮಳೆ ನೀರು ಕೊಯ್ಲು ಹಾಗೂ ನೀರಿಂಗಿಸುವಿಕೆಯ ವಿವಿಧ ಯಶೋಗಾಥೆಗಳನ್ನು ಪ್ರದರ್ಶಿಸಿ ಸಭಿಕರಿಗೆ ಮಾಹಿತಿ ನೀಡಿದರು. ಪ್ರಶ್ನೆ ಕೇಳುತ್ತಾ, ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸಂವಾದ ನಡೆಸುತ್ತಾ, ಸುಂದರವಾಗಿ ಕಾರ್ಯಾಗಾರ ನಡೆಸಿಕೊಟ್ಟರು.    

ಕಥೊಲಿಕ್‌ ಸಭಾ ಅಧ್ಯಕ್ಷ ಆಲ್ವಿನ್‌ ಡಿಸೋಜ ಸ್ವಾಗತಿಸಿ, ಪರಿಸರ ಆಯೋಗದ ಕಾರ್ಯದರ್ಶಿ ಲುವಿಸ್‌ ಜೆ. ಪಿಂಟೊ ವಂದಿಸಿದರು. ಸಂತ ಆಗ್ನೆಸ್‌ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಚಾರ್ಲ್ಸ್‌ ಪಾಯ್ಸ್‌ ನಿರೂಪಿಸಿದರು.