ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಲವಾರು ಎಡವಟ್ಟುಗಳಿಗೆ ದಾರಿಮಾಡಿಕೊಡುತ್ತಿದೆ. ನಿರ್ಮಿಸುತ್ತಿರುವ ರಸ್ತೆಗಳು ವಿಸ್ತಾರವಾಗಿ ಬೆಳೆದಿದೆ. ಆದರೆ ನಿರ್ಮಾಣದ ಸಂದರ್ಭದಲ್ಲಿ ಸೂಕ್ತ ಎಚ್ಚರಿಕೆಯ ಸೂಚನೆಗಳನ್ನು, ಬ್ಯಾರಿ ಕೇಡ್ ಗಳನ್ನು, ದಿಕ್ಸೂಚಿಗಳನ್ನು ಇಟ್ಟು ಕೆಲಸವನ್ನು ನಿರ್ವಹಿಸಬೇಕಿರುವ ಡಿ ಬಿ ಎಲ್ ಕಂಪನಿಯು ಅವೆಲ್ಲವನ್ನು ಗಾಳಿಗೆ ತೂರಿ ಬೇಕಾ ಬಿಟ್ಟಿಯಂತೆ ಕೆಲಸವನ್ನು ನಿರ್ವಹಿಸುತ್ತಿದೆ. ಇದರಿಂದಾಗಿ ಚಿಕ್ಕ ವಾಹನಗಳಲ್ಲಿ ಚಲಿಸುವ ಪ್ರಯಾಣಿಕರು ದಿಕ್ಕು ತಪ್ಪಿದವರಂತಾಗಿ ಹೊಂಡ ಗುಂಡಿಗಳಲ್ಲಿ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. 

ಈ ಪರಿಸ್ಥಿತಿಯು ರಸ್ತೆ ನಿರ್ಮಾಣಗೊಳ್ಳುತ್ತಿರುವ ಎಲ್ಲಾ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ. ರಸ್ತೆಯ ಉಸ್ತುವಾರಿ ನೋಡಿಕೊಳ್ಳ ಬೇಕಿರುವ ಪ್ರಾಧಿಕಾರ ಕೂಡಾ ಈ ಬಗ್ಗೆ ಜಾಗರೂಕತೆಯಿಂದ ವರ್ತಿಸುತ್ತಿಲ್ಲ. ಸಾಣೂರು, ಹಂಡೇಲು, ಎಡಪದವು, ವಾಮಂಜೂರು, ಇತ್ಯಾದಿ ಪ್ರದೇಶಗಳಲ್ಲಿ ಹಲವಾರು ಮಂದಿ ಈಗಾಗಲೇ ತಮ್ಮ ಪ್ರಾಣವನ್ನು ಕಳೆದುಕೊಂಡಿರುತ್ತಾರೆ. 

ಇತ್ತೀಚೆಗೆ ತೊಡಾರು ಪ್ರದೇಶದಲ್ಲಿ ರಸ್ತೆಯ ಮಧ್ಯೆ ನಿರ್ಮಿಸಿದ್ದ ಗುಂಡಿಗೆ ಬಿದ್ದು ಶಬ್ನಂ ಅಬ್ದುಲ್ ಖಾದರ್ ಎನ್ನುವವರು ದುರ್ಮರಣಕ್ಕೀಡಾದರು. 

ಅವರ ದುರ್ಮರಣಕ್ಕೆ ಅವೈಜ್ಞಾನಿಕ ಕಾಮಗಾರಿ ನಡೆದು ನಡು ರಸ್ತೆಯಲ್ಲಿ ಹೊಂಡ ನಿರ್ಮಿಸಿದ್ದೇ ಮುಖ್ಯ ಕಾರಣವಾಗಿತ್ತು. ಅದೇ ಪ್ರದೇಶದಲ್ಲಿ ಈ ಹಿಂದೆಯೂ ಕೂಡ ಎರಡು ಮರಣಗಳು ಸಂಭವಿಸಿರುತ್ತದೆ. 

ಇದೀಗ ಡಿ ಬಿ ಎಲ್ ಕಂಪನಿಯವರು ದುರಂತಕ್ಕೆ ತಾವು ಕಾರಣವಲ್ಲ ಎಂಬ ದೃಷ್ಟಿಯಲ್ಲಿ ಮರಣ ಹೊಂದಿದವರ ಮೇಲೆ ಅಜಾಗರೂಕ ಚಾಲನೆಯ ದೂರನ್ನು ನೀಡಿರುತ್ತಾರೆ. ಇದು ಸತ್ಯಕ್ಕೆ ದೂರವಾದ ವಿಷಯವಾಗಿದೆ ಎಂದು ಮೃತಪಟ್ಟ ಅಬ್ದುಲ್ ಖಾದರ್ ಅವರ ಪುತ್ರ ಶಾಹುಲ್ ಹಮೀದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ. 

ಈ ವಿಷಯದಲ್ಲಿ ತಾವೆಲ್ಲರೂ ದುರ್ಘಟನೆ ನಡೆದ ಸ್ಥಳವನ್ನು ನೋಡಿದ್ದು ಹಮೀದ್ ಅವರ ಹೇಳಿಕೆ ನಿಜ ಎಂದು ಮೂಡುಬಿದಿರೆ ತಾಲೂಕು ಮುಸ್ಲಿಂ ಸಮಿತಿಯ ಅಧ್ಯಕ್ಷ ಅಬ್ದುಲ್ ಸಲಾಂ, ವಕೀಲ ಇರ್ಷಾದ್ ಏನ್ ಜಿ, ಅಬ್ದುಲ್ ರಹಿಮಾನ್ ಕೈಕಂಬ, ಉಸ್ಮಾನ್ ಅಬ್ದುಲ್ಲಾ ಸೂರಿಂಜೆ ಹಾಗೂ ಇತರರು ದನಿಗೂಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಾರಿಸ್ ,ಸಕ್ವೀರ್, ಪರಂಗಿಪೇಟೆ, ಫಯಾಜ್ ಬಾಂಬಿಲ, ಇಬ್ರಾಹಿಂ ಹಾಜರಿದ್ದರು.