ದಾವಣಗೆರೆ:  ಕಷ್ಟದಲ್ಲೇ ಬೆಳೆದು ಕಠಿಣ ಪರಿಶ್ರಮದಿಂದ ಯುವತಿಯೊಬ್ಬರು ಇದೀಗ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ. ಮನೆಯಲ್ಲಿ ಅತೀ ಬಡತನ  ಇದ್ದರೂ ನೌಕಾದಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೇಲುಗೈ ಸಾಧಿಸಿದ್ದಾರೆ, ಮನೆಗೆ ಆಧಾರಸ್ತಂಭವಾಗಿದ್ದ ತಂದೆ  ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದರು.

ತಾಯಿ ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿ ಶಿಕ್ಷಣ ನೀಡಿ ಮಗಳ ಈ ಸಾಧನೆಗೆ ಪಾತ್ರರಾಗಿದ್ದಾರೆ. ತಾಯಿಯ ಆಸರೆಯಲ್ಲೇ ಬೆಳೆದ ಭೂಮಿಕ ಹರಿಹರ ನಗರದಲ್ಲಿರುವ ಸಿಬಾರ ವೃತ್ತದ ನಿವಾಸಿ ಲತಾ ಎಂಬವರ ಪುತ್ರಿ. ಇದೀಗ ಇವರು ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾಗಿ  ಹೆಗ್ಗಳಿಕೆ ಗಳಿಸಿದ್ದಾರೆ. ತಂದೆಯನ್ನು ಕಳೆದುಕೊಂಡ ಭೂಮಿಕಾರಿಗೆ ಆ ಕೊರಗು ನೀಗಿಸಿದವರು ತಾಯಿ ಲತಾ. ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡುತ್ತಾ, ಎರಡು ಹಸುಗಳನ್ನು ಸಾಕುತ್ತಿದ್ದಾರೆ. ಇದರಿಂದ ಕೈ ಸೇರಿದ ಹಣದಿಂದ ತನ್ನ ಮೂರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. 

ಫಾರ್ಮಸಿ ವ್ಯಾಸಂಗ ಮಾಡಿರುವ ಭೂಮಿಕ ಸಾಕಷ್ಟು ಅರ್ಜಿ ಹಾಕಿ ಕೆಲಸಕ್ಕಾಗಿ ಅಲೆದಾಡಿದರು. ಭೂಮಿಕ ನಿಷ್ಠೆಯಿಂದ ಓದಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದು ಕೇರಳದಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನೌಕಾದಳ ಮೊದಲನೇ ಪಟ್ಟಿಯಲ್ಲೇ ಇವರ ಹೆಸರು ಬಂದಿದ್ದು, ಕುಟುಂಬ ಖುಷಿ ಹೆಚ್ಚಿಸಿದ್ದಾರೆ. ಕೋಚಿಂಗ್ ಸೆಂಟರಿಗೆ  ಹೋಗದೆ ಯೂಟ್ಯೂಬ್ ತರಗತಿಗಳನ್ನೇ ನೋಡಿ ಪ್ರತಿದಿ‌ನ ನಾಲ್ಕರಿಂದ ಐದು ಗಂಟೆ  ಓದಿ  ಈ ಸಾಧನೆ ಮಾಡಿದ್ದು  ಶ್ರೇಷ್ಠವಾಗಿದೆ.