ಮಂಗಳೂರು: ದ.ಕ ಜಿಲ್ಲೆಯ ನಗರ ಪ್ರದೇಶದಲ್ಲಿ ವಾಸಿಸುವ ನಾಗರೀಕರಿಗೆ ಇ-ಕ್ಷಣದಡಿಯಲ್ಲಿ ಜಾತಿ, ಆದಾಯ, ವಾಸ ಸ್ಥಳ ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅದರಂತೆ ಪ್ರಸ್ತುತ 4,30,499 ಸದಸ್ಯರನ್ನು ಗುರುತಿಸಲಾಗಿದ್ದು, ಈಗಾಗಲೇ 1,54,000 ಸದಸ್ಯರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇನ್ನುಳಿದ ಸದಸ್ಯರ ಮಾಹಿತಿಯ ಸಂಗ್ರಹಣೆಗಾಗಿ ಗ್ರಾಮಕರಣಿಕರು ಸ್ಥಳ ಪರಿಶೀಲನೆಗೆ ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸಮರ್ಪಕವಾದ ಮಾಹಿತಿಯನ್ನು ಒದಗಿಸುವಂತೆ ಅಥವಾ ಪಡಿತರ ಚೀಟಿಯೊಂದಿಗೆ ತಮ್ಮ ಗ್ರಾಮಕರಣಿಕರ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಸಲ್ಲಿಸಬೇಕು.
ಈ ಯೋಜನೆಯಿಂದ ನಾಡಕಚೇರಿಯಲ್ಲಿ ಅಥವಾ ಆನ್ಲೈನ್ಲ್ಲಿ ತ್ವರಿತವಾಗಿ ಜಾತಿ, ಆದಾಯ, ವಾಸಸ್ಥಳ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಈ ಯೋಜನೆಯನ್ನು ಪುರಸ್ಕರಿಸಿ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.